ADVERTISEMENT

ಶನಿವಾರಸಂತೆ | ಅಂತ್ಯಕ್ರಿಯೆಗೂ ಬಾರದ ಕುಟುಂಬಸ್ಥರು!

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿ, ಹಿಂದೂ ಧರ್ಮದ ವಿಧಿವಿಧಾನದಂತೆ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 11:50 IST
Last Updated 6 ಜುಲೈ 2020, 11:50 IST
ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದ ದೃಶ್ಯ 
ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದ ದೃಶ್ಯ    

ಶನಿವಾರಸಂತೆ : ಸಮೀಪದ ಗೋಪಾಲಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಅವರ ಅಂತ್ಯಸಂಸ್ಕಾರಕ್ಕೆ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರು ಬಾರದಿದ್ದಾಗ ಗ್ರಾಮಸ್ಥರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರೇ ಸೇರಿಕೊಂಡು ಅಂತ್ಯಕ್ರಿಯೆ ನೆರವೇರಿಸಿದ ಘಟನೆಯು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.

ಮೃತ ವ್ಯಕ್ತಿ ಯೂಸೂಫ್ (68). ಅವರ ಮೂಲ ಹೆಸರು ವರ್ಗೀಸ್. ಕ್ರೈಸ್ತ ಧರ್ಮದಲ್ಲಿ ಜನಿಸಿದ್ದ ಅವರು ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು.

ಇಸ್ಲಾಂ ಧರ್ಮದ ಪತ್ನಿ ಮತ್ತು ಮೂವರು ಮಕ್ಕಳು ಮಂಗಳೂರಿನಲ್ಲಿ ನೆಲೆಸಿದ್ದಾರೆ.

ADVERTISEMENT

ಯೂಸೂಫ್ ಅವರು ಗೋಪಾಲಪುರದ ಮನೆಯಲ್ಲಿ ಒಂಟಿಯಾಗಿ ಬದುಕು ನಡೆಸುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ಈಚೆಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಜುಲೈ 4) ಮೃತಪಟ್ಟಿದ್ದರು. ಅನಾಥ ಶವವೆಂದು ಭಾವಿಸಿ ಮೃತದೇಹವನ್ನು ಮಡಿಕೇರಿಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.

ಈ ವಿಚಾರವು ಗೋಪಾಲಪುರ ಗ್ರಾಮಸ್ಥರು ಹಾಗೂ ಕರವೇ ತಾಲ್ಲೂಕು ಘಟಕದ ಕಾರ್ಯಕರ್ತರಿಗೆ ತಿಳಿದು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ, ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರು ಎನ್ನಲಾಗಿದೆ.

ಬಳಿಕ ಭಾನುವಾರ ಸಂಜೆ ಗ್ರಾಮಸ್ಥರು, ಕ.ರ.ವೇ ತಾಲ್ಲೂಕು ಘಟಕದ ಕಾರ್ಯಕರ್ತರೇ ಯೂಸೂಫ್ ಅವರ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ವಿಧಿವಿಧಾನದಂತೆ ನೆರವೇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.