ನವದೆಹಲಿ: ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ರಚನೆಯಾಗಿರುವ ಫನಿ ಚಂಡ ಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದೆ. ಸದ್ಯ ಗಂಟೆಗೆ 200 ಕಿ.ಮೀ ವೇಗ ಪಡೆದುಕೊಂಡಿರುವ ಫನಿಒಡಿಶಾದತ್ತ ಧಾವಿಸಿ ಬರುತ್ತಿದೆ. ಚಂಡಮಾರುವನ್ನು ಎದುರಿಸಲು ಒಡಿಶಾ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಂಡಿದೆ.
ಸದ್ಯ ಒಡಿಶಾದಲ್ಲಿ ಎನ್ಡಿಆರ್ಎಫ್ ಪಡೆಗಳು ಸನ್ನದ್ಧು ಸ್ಥಿತಿಯಲ್ಲಿವೆ.ಫನಿಯ ಕಾರಣಕ್ಕಾಗಿಯೇ ಒಡಿಶಾದಲ್ಲಿ 879 ವಿವಿಧೋದ್ದೇಶ ವಸತಿಗಳನ್ನು ಸ್ಥಾಪಿಸಲಾಗಿದೆ. ಇದಲ್ಲಿ ಹತ್ತು ಲಕ್ಷ ಜನರಿಗೆ ಏಕಕಾಲಕ್ಕೆ ಊಟ ವಸತಿ ಕಲ್ಪಿಸಲು ಸಾಧ್ಯವಿದೆ. ಇನ್ನೊಂದೆಡೆ ಕರಾವಳಿ ಭಾಗದ ರೈಲು ಮಾರ್ಗಗಳಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.
ಒಡಿಶಾ ಮಾತ್ರವಲ್ಲೇ ತಮಿಳುನಾಡು, ಆಂಧ್ರ ಪ್ರದೇಶದ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗಗಳಲ್ಲಿಯೂ ತೀವ್ರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮೂರೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
‘ಫನಿ ಚಂಡಮಾರುತದ ಪ್ರಭಾವದಿಂದ ಮಳೆಯಾಗುವ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 175–185 ಕಿ.ಮೀ ಇರಲಿದೆ. ಇದು 200 ಕಿ.ಮೀಗೂ ತಲುಪುವ ಸಾಧ್ಯತೆಗಳಿವೆ. ಚಂಡಮಾರತವು ಒಡಿಶಾದ ಕರಾವಳಿಯ ಮೂಲಕ ಪಶ್ಚಿಮ ಬಂಗಾಳಕ್ಕೆ ತಲುಪಲಿದೆ. ಇದೇ ಕಾರಣಕ್ಕಾಗಿ ಕೆಲ ಮಾರ್ಗಗಳಲ್ಲಿ ರೈಲ್ವೆ ಸಂಚಾರವನ್ನು ನಿರ್ಬಂಧಿಸುವಂತೆಯೂ, ಕೆಲವೆಡೆ ಮಾರ್ಗ ಬದಲಾವಣೆ ಮಾಡುವಂತೆಯೂ ತಿಳಿಸಲಾಗಿದೆ,’ ಎಂದು ಭಾರತೀಯ ಹವಾಮಾನ ಇಲಾಖೆಯ ಭುವನೇಶ್ವರ ವಿಭಾಗದ ನಿರ್ದೇಶಕ ಎಚ್.ಆರ್.ಬಿಸ್ವಾಸ್ ಅವರು ತಿಳಿಸಿದ್ದಾರೆ.
ತೀವ್ರ ಸ್ವರೂಪಕ್ಕೆ ತಿರುಗಿರುವ ಚಂಡಮಾರುತವು ಅನಾಹುತ ಸೃಷ್ಟಿ ಮಾಡುವ ಆತಂಕವಿದೆ. ಹೀಗಾಗಿ ಅದರ ಪರಿಣಾಮಕ್ಕೆ ತುತ್ತಾಗಲಿರುವ ಒಡಿಶಾ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಿಗಳಿಗೆ ಈಗಾಗಲೇ ತಾಕೀತು ಮಾಡಿದ್ದಾರೆ.
ಮೇ.3ರಂದು ಒಡಿಶಾಕ್ಕೆ ಅಪ್ಪಳಿಸಲಿರುವ ಫನಿ ನಂತರ ಪಶ್ಚಿಮ ಬಂಗಾಳಕ್ಕೆ ತಲುಪಲಿದೆ. ಅಷ್ಟು ಹೊತ್ತಿಗೆ ಕ್ಷೀಣವಾಗಲಿರುವ ಫನಿ ಅಲ್ಲಿ ಸಾಧಾರಾಣ ಮಳೆ ಸುರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.