ADVERTISEMENT

ಹತ್ತಿಯಿಂದ ವಿಮುಖರಾಗುತ್ತಿರುವ ರೈತರು

ಕೆ.ಎಸ್.ಗಿರೀಶ್
Published 7 ಅಕ್ಟೋಬರ್ 2018, 20:29 IST
Last Updated 7 ಅಕ್ಟೋಬರ್ 2018, 20:29 IST
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು   

ಮೈಸೂರು: ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿಯಿಂದ ಜಿಲ್ಲೆಯ ರೈತರು ವಿಮುಖರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುತ್ತಿದ್ದ ಎಚ್.ಡಿ.ಕೋಟೆ ತಾಲ್ಲೂಕಿನಲ್ಲೇ ರೈತರು ಹತ್ತಿ ಬಿಟ್ಟು ಮೆಕ್ಕೆಜೋಳದತ್ತ ವಾಲಿದ್ದಾರೆ.

ಪ್ರಸಕ್ತ ಮುಂಗಾರಿನಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕಿನ 30 ಸಾವಿರ ಹೆಕ್ಟೇರ್‌ಗಳಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿತ್ತು. ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೂ ಬಿತ್ತನೆಯಾಗಿರುವುದು 25,410 ಹೆಕ್ಟೇರ್‌ಗಳಲ್ಲಿ. ಇನ್ನುಳಿದ ಪ್ರದೇಶಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಇದರಿಂದ ಮೆಕ್ಕೆಜೋಳದ ಬಿತ್ತನೆ ಪ್ರಮಾಣ 8,300 ಹೆಕ್ಟೇರ್‌ಗಳಿಂದ (ಉದ್ದೇಶಿತ ಗುರಿ) 12,620 ಹೆಕ್ಟೇರ್‌ಗಳಿಗೆ ಹೆಚ್ಚಾಗಿದೆ.

ಕಳೆದ ವರ್ಷ ಹತ್ತಿ ಕಟಾವು ಸಮಯದಲ್ಲಿ ಬಿದ್ದ ಮಳೆಯು ಬೆಳೆಯನ್ನು ನಾಶ ಮಾಡಿತು. ಇದರಿಂದ ರೈತರು ಅಪಾರ ನಷ್ಟಕ್ಕೆ ತುತ್ತಾದರು. ಮೇ ಮೊದಲ ವಾರದಲ್ಲಿ ಬಿತ್ತನೆಯಾಗಿ, ಅಕ್ಟೋಬರ್‌ ಮೊದಲ ವಾರದ ಹೊತ್ತಿಗೆ ಕಟಾವಿಗೆ ಬರುತ್ತದೆ. ಏಕಕಾಲಕ್ಕೆ ಹತ್ತಿ ಬಿಡಿಸಲು ಕಾರ್ಮಿಕರ ಕೊರತೆ ಎದುರಾಗಿದೆ. ಹೆಚ್ಚುತ್ತಿರುವ ಕೂಲಿ ದರ, ಮಳೆಯಿಂದ ಉಂಟಾಗುವ ನಷ್ಟದಿಂದಾಗಿ ಹತ್ತಿ ಬೆಳೆ ಬಿಟ್ಟು ಮೆಕ್ಕೆಜೋಳದತ್ತ ವಾಲಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜವರಯ್ಯ ತಿಳಿಸುತ್ತಾರೆ.

ADVERTISEMENT

ದೇಶದಲ್ಲಿ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಹೆಚ್ಚಾಗಿ ರಾಯಚೂರು, ಧಾರವಾಡ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೆಳಗಾವಿ, ಹಾವೇರಿಗಳಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ, ಆ ಭಾಗದಲ್ಲೇ ಹತ್ತಿಗೆ ಸಂಬಂಧಿಸಿದ ಕೈಗಾರಿಕೆಗಳು ಕೇಂದ್ರೀಕೃತಗೊಂಡಿವೆ.

ಹತ್ತಿಯಿಂದ ಮೆಕ್ಕೆಜೋಳದತ್ತ ರೈತರ ವಲಸೆ

ಹತ್ತಿ ಬೆಳೆಯಿಂದ ರೈತರು ಮೆಕ್ಕೆಜೋಳದತ್ತ ವಾಲಿದ್ದಾರೆ. ಕಳೆದ ವರ್ಷ ಉಂಟಾದ ನಷ್ಟ, ಕಾರ್ಮಿಕರ ಕೊರತೆಯಿಂದ ಹತ್ತಿ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕಿದ್ದಾರೆ. ಸುಲಭವಾಗಿ ಬೆಳೆಯುವ ಮೆಕ್ಕೆಜೋಳವನ್ನು ಬಿತ್ತನೆ ಮಾಡುವ ಪ್ರಯೋಗಕ್ಕೆ ರೈತರು ಸಾಮೂಹಿಕವಾಗಿ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಹತ್ತಿ ಬೆಳೆಯುವ ಪ್ರದೇಶದಲ್ಲಿ ಇಳಿಕೆ‌ (ಎಚ್.ಡಿ.ಕೋಟೆ ತಾಲ್ಲೂಕು)

30,000 ಹೆಕ್ಟೇರ್ ಬಿತ್ತನೆ ಗುರಿ

25,410 ಹೆಕ್ಟೇರ್ ಬಿತ್ತನೆಯಾಗಿರುವುದು

ಮೆಕ್ಕೆಜೋಳ ಬಿತ್ತನೆ ಪ್ರಮಾಣದಲ್ಲಿ ಏರಿಕೆ‌

8,300 ಹೆಕ್ಟೇರ್ ಬಿತ್ತನೆ ಗುರಿ

12,620 ಹೆಕ್ಟೇರ್ ಬಿತ್ತನೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.