ಹಾವೇರಿ: ಕಾರಿನಲ್ಲಿ ತೆರಳುತ್ತಿದ್ದ ಸಚಿವ ಎಸ್. ಸುರೇಶ್ಕುಮಾರ್ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಕಂಡು ‘ರೈತ ದಿನ’ದ ಅಂಗವಾಗಿ ಶಾಲು ಹೊದಿಸಿ ಸನ್ಮಾನಿಸಿದರು.
ತಾಲ್ಲೂಕಿನ ನೆಲೋಗಲ್ಲ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಲು ಹೋಗುತ್ತಿದ್ದ ವೇಳೆ, ಅದೇ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿ ಅವರನ್ನು ಕಂಡು ಅಭಿನಂದಿಸಿ, ಬಾಗಿ ನಮಸ್ಕರಿಸಿದರು. ಈ ಕುರಿತು ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವರ್ಗಾವಣೆ ನೀತಿ: ‘ಕಡ್ಡಾಯ ವರ್ಗಾವಣೆ’ ಎಂಬುದು ಶಿಕ್ಷೆಯ ರೀತಿಯಲ್ಲಿದೆ. ‘ಶಿಕ್ಷಕ ಸ್ನೇಹಿ ವರ್ಗಾವಣೆ’ಯನ್ನು ಶೀಘ್ರ ಜಾರಿಗೆ ತರಲಾಗುವುದು ಅವರು ತಿಳಿಸಿದರು.
‘2017ರಲ್ಲಿ ಜಾರಿಗೆ ಬಂದ ‘ಕಡ್ಡಾಯ ವರ್ಗಾವಣೆ ನೀತಿ’ ಎಲ್ಲರಿಗೂ ಬೇಸರ ತರಿಸಿದೆ. ಕಡ್ಡಾಯ ರಜೆ, ಕಡ್ಡಾಯ ನಿವೃತ್ತಿ ರೀತಿಯಲ್ಲಿ ಕಡ್ಡಾಯ ವರ್ಗಾವಣೆ ಕೂಡ ಶಿಕ್ಷೆಯಾಗಿದೆ. ಶಿಕ್ಷಕ ಸ್ನೇಹಿ ಮಸೂದೆಯನ್ನು ಬರುವ ವಿಧಾನಮಂಡಲದಲ್ಲಿ ಮಂಡಿಸಿ, ಜಾರಿಗೆ ತರಲಾಗುವುದು. ವರ್ಗಾವಣೆ ಪ್ರಕ್ರಿಯೆಯನ್ನು ಜೂನ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.