ಬೆಂಗಳೂರು: ಇದೇ 31 ರೊಳಗೆ ಹಣಕಾಸು ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಬೇಕು. ಇಲ್ಲವಾದರೆ ಆಗಸ್ಟ್ನಿಂದ ಯಾವುದೇ ಯೋಜನೆಗಳಿಗೆ ಅಥವಾ ಸರ್ಕಾರಿ ನೌಕರರ ಸಂಬಳಕ್ಕೆ ಬೊಕ್ಕಸದಿಂದ ಒಂದು ಪೈಸೆ ಬಿಡುಗಡೆ ಮಾಡಲು ಸಾಧ್ಯವಿಲ್ಲ.
ಎಚ್.ಡಿ.ಕುಮಾರಸ್ವಾಮಿಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್ಗೆ ಇದೇ 31ರ ಒಳಗೆ ಒಪ್ಪಿಗೆ ನೀಡಿದರಷ್ಟೇ ಆಗಸ್ಟ್ನಿಂದ ಸರ್ಕಾರದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯ. ಆದರೆ, ಕುಮಾರಸ್ವಾಮಿ ಸರ್ಕಾರ ಪತನಗೊಂಡಿದೆ. ಹೊಸ ಸರ್ಕಾರ ರಚನೆ ಆಗಿ ಅಧಿವೇಶನ ಕರೆದು ಮಸೂದೆಗೆ ಒಪ್ಪಿಗೆ ನೀಡಬೇಕು. ಅಲ್ಲಿಯವರೆಗೆ ಏನೂ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚಿಸಿದರೆ, ತಕ್ಷಣವೇ ಈ ಮಸೂದೆಯನ್ನು ಕೈಗೆತ್ತಿಕೊಂಡು ಒಪ್ಪಿಗೆ ನೀಡುವ ಕೆಲಸ ಮಾಡಬೇಕು. ಆದರೆ, ಕುಮಾರಸ್ವಾಮಿ ಮಂಡಿಸಿದ ಬಜೆಟ್ ಆಗಿರುವುದರಿಂದ ಒಪ್ಪಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಅಲ್ಪ ಕಾಲದಲ್ಲಿ ಹೊಸ ಬಜೆಟ್ ಮಂಡಿಸಲೂ ಸಾಧ್ಯವಿಲ್ಲ.
ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಹಣಕಾಸು ಮಸೂದೆಯನ್ನು ರಾಜ್ಯಪಾಲರು ಸಂಸತ್ಗೆ ಕಳಿಸುತ್ತಾರೆ. ಅಲ್ಲಿ ಮಸೂದೆಯನ್ನು ಅಂಗೀಕರಿಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಈಗ ಅಂತಹ ಸ್ಥಿತಿ ಇಲ್ಲ. ಯಾವ ಹಾದಿ ಅನುಸರಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.