ಜಗಳೂರು: ವಿನಾಶದ ಅಂಚಿನಲ್ಲಿರುವ ಕೊಂಡುಕುರಿ ಸಂತತಿಯ ಆವಾಸ ಸ್ಥಾನವಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ಪ್ರದೇಶದಲ್ಲಿ ಮರಗಿಡಗಳು ಸುಟ್ಟುಹೋಗಿವೆ.
ಕೊಂಡುಕುರಿ ವನ್ಯಧಾಮದ ಕೊಡೆಗುಂಡು ಹಾಗೂ ವಾಲ್ ಗುಂಡು ಪ್ರದೇಶದಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿಯವರೆಗೂ ವ್ಯಾಪಕವಾಗಿ ಹರಡಿದೆ. ಕಡಿಮೆ ಸಂಖ್ಯೆಯಲ್ಲಿದ್ದ ಅರಣ್ಯ ಸಿಬ್ಬಂದಿ ಬೆಂಕಿಯ ಜ್ವಾಲೆಯನ್ನು ನಂದಿಸಲು ಯತ್ನಿಸಿದರೂ ಸಂಪೂರ್ಣ ನಂದಿಸಲು ಸಾಧ್ಯವಾಗಿಲ್ಲ.
‘ಕೊಂಡುಕುರಿ ವನ್ಯಧಾಮದ ಪ್ರದೇಶದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕೂಡಲೇ ಸ್ಥಳೀಯ ಸಿಬ್ಬಂದಿಗೆ ಸೂಚನೆ ನೀಡಿ, ಬೆಂಕಿಯನ್ನು ನಂದಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ಅವರು ‘ಪ್ರಜಾವಾಣಿ’ಗೆ
ಸ್ಪಷ್ಟಪಡಿಸಿದರು.
ವಿವಿಧ ಜಾತಿಯ ಮರಗಿಡಗಳು ಸುಟ್ಟು ಭಸ್ಮವಾಗಿವೆ. ವಿನಾಶದ ಅಂಚಿನಲ್ಲಿರುವ ಕೊಂಡುಕುರಿ, ಕೃಷ್ಣಮೃಗ, ಚಿಂಕಾರ, ಚಿರತೆ ಸೇರಿ ಅಪಾರ ಜೀವವೈವಿಧ್ಯದ ತಾಣವಾಗಿರುವ ಅರಣ್ಯದಲ್ಲಿ ಈಚೆಗೆ ಸೂಕ್ತ ಸಂರಕ್ಷಣೆ ಹಾಗೂ ಉಸ್ತುವಾರಿ ಕೊರತೆಯಾಗಿದೆ ಎಂಬ ದೂರುಗಳಿವೆ. ಬೆಂಕಿ ಕಾಣಸಿಕೊಂಡ ಸಮಯದಲ್ಲಿ ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ, ಪ್ರಮುಖ ಅಧಿಕಾರಿ ಮತ್ತು ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.