ಮಂಗಳೂರು: ತುಳು ಪರಿಷತ್ ಆಶ್ರಯದಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿಸೆಂಬರ್ನಲ್ಲಿ ನಡೆಯಲಿದೆ.
ನಗರದ ಹೋಟೆಲ್ ವುಡ್ಲ್ಯಾಂಡ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ತುಳು ಪರಿಷತ್ ಕೇಂದ್ರೀಯ ಸಮಿತಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.
ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸ್ವರ್ಣ ಸುಂದರ್ ಮಾತನಾಡಿ, ‘ಯುವ ಸಮುದಾಯದಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮ್ಮೇಳನವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಲಿದೆ. ತುಳು ಭಾಷಿಗರೆಲ್ಲರೂ ಈ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಪ್ರಭಾಕರ್ ನೀರುಮಾರ್ಗ ಮಾತನಾಡಿ, ‘ವಿದ್ಯಾರ್ಥಿ ತುಳು ಸಮ್ಮೇಳನವು ಅತ್ಯಂತ ಮೌಲಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ’ ಎಂದರು.
ತುಳು ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ , ‘ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ಕಾಲೇಜು ವಿದ್ಯಾರ್ಥಿಗಳೇ ಸಮ್ಮೇಳನದ ಗೋಷ್ಠಿ, ಕಾರ್ಯಕ್ರಮಗಳನ್ನು ನಡೆಸಿಕೊಡುವರು’ ಎಂದು ವಿವರ ನೀಡಿದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಮಾತನಾಡಿ, ‘ಈ ಸಮ್ಮೇಳನದ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಬದುಕಿನ ಸಂಶೋಧನೆ, ದಾಖಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ’ ಎಂದು ತಿಳಿಸಿದರು.
ತುಳು ಪರಿಷತ್ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಪ್ರೊ. ವಿನುತಾ ರೈ, ಮಮತಾ ಡಿ.ಎಸ್.ಗಟ್ಟಿ, ಶಿವಾನಂದ ಕರ್ಕೇರಾ, ಡಾ.ವಾಸುದೇವ ಬೆಳ್ಳೆ, ಪ್ರಶಾಂತ್ ಕಾರಂತ್, ವಾಣಿ ರಾಜಗೋಪಾಲ್ , ಪಲ್ಲವಿ ಕಾರಂತ್ ಮಾತನಾಡಿದರು.
ವಿದ್ಯಾರ್ಥಿ ತುಳು ಸಮ್ಮೇಳನದ ವಿವಿಧ ಕಾರ್ಯಕ್ರಮ ಸ್ವರೂಪಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ತುಳು ಪರಿಷತ್ ಸದಸ್ಯರುಗಳಾದ ಸುಭಾಶ್ಚಂದ್ರ ಕಣ್ವತೀರ್ಥ, ಗೋಪಾಲ್ ಅಂಚನ್, ಅಕ್ಷತಾ ಶೆಟ್ಟಿ, ಶ್ರೀಮತಿ ಶೋಭಾ ಶೆಟ್ಟಿ, ರಮೇಶ್ ಮಂಚಕಲ್, ಬಾಬು ಪಾಂಗಾಳ, ಇಸ್ಮಾಯಿಲ್ ಪೆರಿಂಜೆ, ಸುದರ್ಶನ್, ಅಮಿತಾ ಆಳ್ವಾ, ಮಣಿ ರೈ, ಅವಿನಾಶ್, ಹರೀಶ್, ವಸಂತ್, ದಿನೇಶ್, ಜಯಲಕ್ಷ್ಮೀ ಶೆಟ್ಟಿ, ಭರತೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.