ADVERTISEMENT

ಬಿಎಸ್‌ವೈಗೆ ಕಪ್ಪು ಬಾವುಟ ಪ್ರದರ್ಶನ: ಐವರ ಬಂಧನ

ಪಿಟಿಐ
Published 25 ಡಿಸೆಂಬರ್ 2019, 22:23 IST
Last Updated 25 ಡಿಸೆಂಬರ್ 2019, 22:23 IST
   

ಕಣ್ಣೂರ:ಪಳಯಾಂಗಡಿ ಸಮೀಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರನ್ನು ಅಡ್ಡಗಟ್ಟಲು ಯತ್ನಿಸಿ ಕಪ್ಪು ಬಾವುಟ ಪ್ರದರ್ಶಿಸಿದ ಆರೋಪದ ಮೇಲೆ ಸಿಪಿಐ ಹಾಗೂ ಯುವ ಕಾಂಗ್ರೆಸ್‌ನ ಐವರು ಕಾರ್ಯಕರ್ತರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸಿಪಿಐನ ಭಾರತೀಯ ವಿದ್ಯಾರ್ಥಿ ಫೆಡರೇಶನ್‌ನ (ಎಸ್‌ಎಫ್‌ಐ) ಮೂವರು ಮತ್ತು ಯುವ ಕಾಂಗ್ರೆಸ್‌ನ ಇಬ್ಬರನ್ನು ಬಂಧಿಸಿರುವ ಪೊಲೀಸರು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಳಯಾಂಗಡಿ ಸಮೀಪ ಮಂಗಳವಾರ ಯಡಿಯೂರಪ್ಪ ಅವರ ಕಾರನ್ನು ಅಡ್ಡಗಟ್ಟಲು ಯತ್ನಿಸಿ, ಕಪ್ಪು ಬಾವುಟ ಪ್ರದರ್ಶಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಯುವ ಕಾಂಗ್ರೆಸ್‌ ಮತ್ತು ಕೆಎಸ್‌ಯುನ 28 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇವರಲ್ಲಿ ಐವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉಳಿದವರನ್ನು ಪೊಲೀಸ್‌ ಠಾಣೆಯಲ್ಲಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವರದಿಗಾಗಿ ತೆರಳಿದ್ದ ಕೇರಳದ ಪತ್ರಕರ್ತರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗಿತ್ತು.

‘ಕಮ್ಯುನಿಸ್ಟ್‌ ಗೂಂಡಾಗಳ ಯೋಜಿತ ದಾಳಿ ಇದಾಗಿದೆ’ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ.

ಯಡಿಯೂರಪ್ಪ ಅವರು ಕಣ್ಣೂರು ಜಿಲ್ಲೆಯ ತಾಲಿಪರಂಬದಲ್ಲಿನ ರಾಜರಾಜೇಶ್ವರಿ ಮತ್ತು ಮಾದಯಿಕಾವು ದೇವಾಲಯಗಳಿಗೆ ತೆರಳಲು ಮಂಗಳವಾರ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸಿಪಿಐ ಹಾಗೂ ಯೂತ್‌ ಕಾಂಗ್ರೆಸ್‌ನ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ‘ಗೋ ಬ್ಯಾಕ್‌’ ಘೋಷಣೆಯನ್ನು ಕೂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.