ಮಡಿಕೇರಿ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಚಾಮರಾಜನಗರ ಜಿಲ್ಲೆಯ ಸೋಲಿಗ ಕುಟುಂಬಗಳಿಗೆ ಕೊನೆಗೂ ಕೊಡಗು ಜಿಲ್ಲಾಡಳಿತದಿಂದ ಆಹಾರ್ ಕಿಟ್ ವಿತರಣೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆ, ಹನೂರಿನ ಸೇಬಿನಕೋಬೆ, ಹೊಸಪೋಡು, ಕತ್ತೆಕಾಲುಪೋಡು ಹಾಡಿಗಳಿಂದ ಗಿರಿಜನರು ಜಿಲ್ಲೆಯ ಸಿದ್ದಾಪುರ, ಒಂಟಿಯಂಗಡಿ ಹಾಗೂ ಅಮ್ಮತ್ತಿ ವ್ಯಾಪ್ತಿಯ ಕಾಫಿ ಎಸ್ಟೇಟ್ಗಳಿಗೆ ಕೂಲಿಗೆ ಬಂದಿದ್ದರು. ಲಾಕ್ಡೌನ್ ಬಳಿಕ ಒಂಟಿಯಂಗಡಿ ಸುತ್ತಮುತ್ತಲ ಎಸ್ಟೇಟ್ಗಳಲ್ಲಿ ಕೆಲಸ ಸ್ಥಗಿತಗೊಳಿಸಲಾಗಿತ್ತು. ಅತ್ತ ಹಣವೂ ಇಲ್ಲ. ಇತ್ತ ವಾಹನದ ವ್ಯವಸ್ಥೆಯೂ ಇಲ್ಲದೆ ಹಲವು ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿದ್ದವು.
ಲಾಕ್ಡೌನ್ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕೆಲವು ಕುಟುಂಬಗಳು ಮಾತ್ರ ಸ್ವಗ್ರಾಮಕ್ಕೆ ಮರಳಿದ್ದವು. ವಾಹನ ವ್ಯವಸ್ಥೆ ಇಲ್ಲದೇ ಎಸ್ಟೇಟ್ನಲ್ಲೇ ಉಳಿದಿದ್ದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಮಾರ್ಚ್ 29ರ ‘ಪ್ರಜಾವಾಣಿ’ಯ ಸಂಚಿಕೆಯಲ್ಲಿ ‘ಕೊಡಗಿನಲ್ಲಿ ಗಿರಿಜನರು ಅತಂತ್ರ’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಬಳಿಕ ಎಚ್ಚೆತ್ತ ಕೊಡಗು ಜಿಲ್ಲೆಯ ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದಾರೆ. ಸೋಲಿಗ ಜನಾಂಗದ 75 ಕುಟುಂಬಗಳ 159 ಜನರು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದರು.
ಇಲಾಖೆಯಿಂದ ಪ್ರತೀ ಕುಟುಂಬಕ್ಕೆ 8 ಕೆ.ಜಿ ಅಕ್ಕಿ, 3 ಕೆ.ಜಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಬೆಲ್ಲ, ಕಡಲೆ ಕಾಳು, ಹುರುಳಿಕಾಳು, 30 ಮೊಟ್ಟೆ, 2 ಲೀಟರ್ ಅಡುಗೆ ಎಣ್ಣೆ, 500 ಗ್ರಾಂ ತುಪ್ಪ ಒಳಗೊಂಡ ಎರಡೆರಡು ಆಹಾರದ ಕಿಟ್ ವಿತರಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿಯಲ್ಲೂ ಸಂಕಷ್ಟ:ಮಣ್ಣು ಕೆಲಸ, ಕಟ್ಟಡ ಕೆಲಸಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಮಡಿಕೇರಿಗೆ ಬಂದಿದ್ದ ಹಲವು ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಿವೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪ ಹಾಗೂ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಬಳಿಯ ಖಾಲಿ ಜಾಗದಲ್ಲಿ ಈ ಕುಟುಂಬಗಳು ನೆಲೆಸಿವೆ. ಅವರಿಗೆ ವಾರದಿಂದ ಕೂಲಿಯೂ ಸಿಗುತ್ತಿಲ್ಲ. ಆಹಾರ ಪದಾರ್ಥಗಳನ್ನು ಯಾರೂ ಪೂರೈಕೆ ಮಾಡುತ್ತಿಲ್ಲ. ಅವರೂ ಅತಂತ್ರರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.