ADVERTISEMENT

ಕಾಳಿ ನದಿಯಲ್ಲಿ ಮುಳುಗಿ ಮೂರು ಮಕ್ಕಳು ಸೇರಿ ನಾಲ್ವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 14:20 IST
Last Updated 17 ಡಿಸೆಂಬರ್ 2018, 14:20 IST
   

ಹಳಿಯಾಳ (ಉತ್ತರ ಕನ್ನಡ): ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ಸೋಮವಾರ ಕಾಳಿ ನದಿಯಲ್ಲಿ ಮುಳುಗಿಹೋಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅವರಲ್ಲಿ ಮೂವರು ಒಂಬತ್ತು ವರ್ಷದ ಒಳಗಿನ ಮಕ್ಕಳಾಗಿದ್ದಾರೆ.

ಗ್ರಾಮದ ದೂಳು ದುಂಡು ಗಾವಡೆ (42), ಗಾಯತ್ರಿ ದೂಳು ಗಾವಡೆ (9), ಕೃಷ್ಣಾ ದೂಳು ಗಾವಡೆ (6) ಮತ್ತು ಅವರ ಕುಟುಂಬದ ಸತೀಶ ಬೀರು ಗಾವಡೆ (7) ಮೃತರು.

ಹೇಗಾಯಿತು?: ದೂಳು ದುಂಡು ಗಾವಡೆ ಅವರ ಪತ್ನಿ ರಾಮಿಬಾಯಿ ಸೋಮವಾರ ಸಂಜೆ ಕಾಳಿ ನದಿಯ ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಅವರ ಜತೆಗೆ ಬಂದಿದ್ದ ಮೂವರು ಮಕ್ಕಳು ಆಟವಾಡುತ್ತ ಕಾಲುಜಾರಿ ನದಿಗೆ ಬಿದ್ದರು. ಅವರನ್ನು ರಕ್ಷಿಸಲು ರಾಮಿಬಾಯಿ ನೀರಿಗೆ ಹಾರಿದರು. ಸಮೀಪದಲ್ಲೇ ಇದ್ದ ದೂಳು ದುಂಡು ಗಾವಡೆ ಕೂಡ ನೀರಿನಲ್ಲಿ ಮುಳುಗುತ್ತಿದ್ದವರನ್ನು ಮೇಲೆತ್ತಲು ನದಿಗೆ ಧುಮುಕಿದರು. ರಾಮಿಬಾಯಿಯನ್ನು ರಕ್ಷಿಸಿದ ಅವರು ಕೊಚ್ಚಿಕೊಂಡು ಹೋದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ರಾಮಿಬಾಯಿಗೆ ಹಳಿಯಾಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಆರೈಕೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಮೃತರ ಪೈಕಿ ಗಾಯತ್ರಿಯ ಶವ ಪತ್ತೆಯಾಗಿದ್ದು, ಉಳಿದವರಿಗೆ ಹುಡುಕಾಟ ನಡೆಸಲಾಗಿದೆ.

ಹಳಿಯಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.