ನಾಗಮುನ್ನೋಳಿ (ಬೆಳಗಾವಿ): ಸ್ವಾತಂತ್ರ್ಯ ಹೋರಾಟಗಾರ, ನಿವೃತ ಶಿಕ್ಷಕರಾದ ಬಸವಲಿಂಗಪ್ಪ ಮಹಾರುದ್ರಪ್ಪ ಕುಂಬಾರ (101) ಅವರು ಶನಿವಾರ ರಾತ್ರಿ ನಿಧನರಾದರು.
ಅವರಿಗೆ ಪತ್ನಿ ಕೃಷ್ಣಾಬಾಯಿ, ಪಾರ್ಶ್ವವಾಯು ತಜ್ಞ ಡಾ.ಎಂ.ಬಿ.ಕುಂಬಾರ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ರಾಯಬಾಗದ ಅವರ ತೋಟದಲ್ಲಿ ಭಾನುವಾರ ಮಧ್ಯಾಹ್ನ ನೇರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1921ರ ಅಕ್ಟೋಬರ್ 15 ರಂದು ರಾಯಬಾಗದಲ್ಲಿ ಜನಿಸಿದ ಬಸವಲಿಂಗಪ್ಪ ಅವರು, ಆರಂಭದ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದರು. ಅವರು ತಮ್ಮ 22ನೇ ವಯಸ್ಸಿಗೆ ರಾಯಬಾಗದಲ್ಲಿ ಮರಾಠಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ನಂತರ ನಾಗರಾಳ,ಬಾವಚಿ, ಬೊಮ್ಮ ನಾಳ,ಪಂಚರಗಾವಹಟ್ಟಿಯಲ್ಲಿ ಕನ್ನಡ ಶಾಲೆ ಶಿಕ್ಷಕರಾಗಿದ್ದರು.
1944 ಹಾಗೂ 45ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯ ವಾಗಿ ಪಾಲ್ಗೊಂಡರು. ಆಗಿನ ಯುವ ಸಮುದಾಯವನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ರಾಯಬಾಗ ತಾಲ್ಲೂಕಿನಲ್ಲಿ ‘ಕುಂಬಾರಜ್ಜ’ ಎಂದೇ ಅವರು ಹೆಸರು ವಾಸಿ.
ಸ್ವಾತಂತ್ರ್ಯದ ನಂತರ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.