ಬೆಂಗಳೂರು: ‘ಅವತಾರ್, ಇಂಡಿಯಾನಾ ಜೋನ್ಸ್, ಟ್ರಾನ್ಸ್ಫಾರ್ಮರ್ಸ್ನಂತಹ ಅತಿಮಾನುಷ ಶಕ್ತಿಗಳ ಸಿನಿಮಾಗಳಿಗೆ ಭಾರತೀಯರು ಈವರೆಗೆ ಆ್ಯನಿಮೇಷನ್, ವಿಎಫ್ಎಕ್ಸ್ ಸೇವೆ ಒದಗಿಸಿದ್ದು ಸಾಕು. ನಮ್ಮಲ್ಲಿಯೇ ಹೇರಳವಾಗಿರುವ ಅತಿಮಾನುಷ ಕತೆಗಳು, ಪುರಾಣಗಳು, ಜನಪದ ಕತೆ–ಕಾವ್ಯಗಳನ್ನು ಆ್ಯನಿಮೇಷನ್ ಮೂಲಕ ಪರದೆ ಮೇಲೆ ತರುವ ಪ್ರಯತ್ನವಾಗಬೇಕು...’
‘ಕತೆಗಳನ್ನು ಆ್ಯನಿಮೇಷನ್, ವಿಎಫ್ಎಕ್ಸ್, 3ಡಿ ಆಯಾಮಗಳಲ್ಲಿ ಕಣ್ಣಿಗೆ ಕಟ್ಟಿಕೊಡುವಂತಹ ಸೃಜನಶೀಲ ತಂತ್ರಜ್ಞರು ಇದ್ದರು. ಆದರೆ, ಆಗ ಭಾರತದಲ್ಲಿ ಅಂತಹ ತಂತ್ರಜ್ಞಾನವಿರಲಿಲ್ಲ, ನಮ್ಮ ತಂತ್ರಜ್ಞರ ಕೈಗೆ ಅವು ಎಟುಕುತ್ತಲೂ ಇರಲಿಲ್ಲ. ಆದರೀಗ ಸ್ಥಿತಿ ಬದಲಾಗಿದೆ. ತಂತ್ರಜ್ಞಾನ ಮನೆ ಬಾಗಿಲಿನವರೆಗೆ ಬಂದಿದೆ, ಅದನ್ನು ಬಳಸಿಕೊಳ್ಳುವಂತಹ ಸೃಜನಶೀಲ ತಂತ್ರಜ್ಞರಿಲ್ಲ...’
‘ನಿಜದ ರೇಸಿಂಗ್ನ ಅನುಭವ ನೀಡುವ ನೀಡ್ ಫಾರ್ ಸ್ಫೀಡ್, ಫೋರ್ಜಾ, ಜಿಟಿಎ ಮೊದಲಾದ ಡಿಜಿಟಲ್ ಗೇಮ್ಗಳು ವಿಶ್ವದಾದ್ಯಂತ ಹೆಸರಾಗಿವೆ. ನಮ್ಮ ಕರಾವಳಿಯ ಕಂಬಳ, ತಮಿಳಿನ ಜಲ್ಲಿಕಟ್ಟು, ಕುಸ್ತಿಗಳನ್ನೂ ಅಷ್ಟೇ ಕರಾರುವಾಕ್ಕಾಗಿ ಡಿಜಿಟಲ್ ಗೇಮಿಂಗ್ಗೆ ಇಳಿಸುವ ಕೆಲಸ ಏಕಾಗಬಾರದು...’
ಆ್ಯನಿಮೇಷನ್, ಡಿಜಿಟಲ್ ಪ್ರದರ್ಶನ ಕಲೆ, ಗೇಮಿಂಗ್ ಕ್ಷೇತ್ರದಲ್ಲಿನ ಆಗುಹೋಗುಗಳು ಮತ್ತು ಮುಂದೆ ಸಾಗಬೇಕಾಗಿರುವ ಹಾದಿಯ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಕಿಯೋನಿಸ್ಕ್ ಸಹಯೋಗದಲ್ಲಿ ಆಯೋಜಿಸಲಾಗಿರುವ ‘ಬೆಂಗಳೂರು ಗೆಫೆಕ್ಸ್–2025’ ಮೂರು ದಿನಗಳ ಮೇಳದ ಉದ್ಘಾಟನಾ ವೇದಿಕೆಯಲ್ಲಿ ಗುರುವಾರ ಕೇಳಿಬಂದ ಮಾತುಗಳಿವು.
ಮೇಲೆ ಚರ್ಚಿಸಲಾದ ಎಲ್ಲ ವಿಷಯಗಳಲ್ಲೂ ಹೊಸ ಹಾದಿ ತುಳಿಯಲು ಸರ್ಕಾರ ಮತ್ತು ಉದ್ಯಮ ಕ್ಷೇತ್ರ ಪರಸ್ಪರ ಸಹಕಾರದಲ್ಲಿ ಕೆಲಸ ಮಾಡಬೇಕು ಎಂಬ ಅಭಿಮತದೊಂದಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆಬಿತ್ತು.
ನಗರದ ಲಲಿತ್ ಅಶೋಕ್ ಹೋಟೆಲ್ನಲ್ಲಿ ಇದೇ ಮಾರ್ಚ್ 1ರವರೆಗೆ ಮೇಳ ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿರುವ ಸ್ಪರ್ಧೆಗಳಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಬಂದಿರುವ ತಂತ್ರಜ್ಞರು ಮತ್ತು ಕಲಾವಿದರು ಮೇಳದಲ್ಲಿ ಕಿಕ್ಕಿರಿದು ತುಂಬಿದ್ದರು. ಸ್ಪರ್ಧೆಯ ಭಾಗವಾಗಿ ಗುರುವಾರ ಪ್ರದರ್ಶಿಸಿದ ಹಲವು ಆ್ಯನಿಮೇಟೆಡ್ ದೃಶ್ಯಾವಳಿಗಳು, ವಿಎಫ್ಎಕ್ಸ್ ಕಲಾಕೃತಿಗಳು ನೋಡುಗರ ಕಣ್ಸೆಳೆದವು. 3ಡಿ ಮತ್ತು 4ಡಿ ಆಯಾಮದ ಅನುಭವ ನೀಡುವ ಕಿರುಚಿತ್ರಗಳು, ದೃಶ್ಯಾವಳಿಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಉತ್ಕೃಷ್ಟ ಮಟ್ಟದ ಆ್ಯನಿಮೇಟೆಡ್ ಮತ್ತು ವಿಎಫ್ಎಫ್ ಕಲಾಕೃತಿಗಳನ್ನು ಭಾರತದಲ್ಲೇ ಸೃಷ್ಟಿಸುವ ಕೆಲಸ ನಿಧಾನವಾಗಿಯಾದರೂ ಆರಂಭವಾಗಿದೆ.–ಬೀರೇನ್ ಘೋಷ್, ಅದ್ಯಕ್ಷ, ಬೆಂಗಳೂರು ಗೇಫೆಕ್ಸ್
ಈ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಹಿಂದಿನ ಬಜೆಟ್ನಲ್ಲಿ ₹300 ಕೋಟಿ ಇರಿಸಿತ್ತು. ಮುಂದೆಯೂ ಅಂತಹ ಸಹಕಾರ ಸರ್ಕಾರದಿಂದ ಸಿಗಲಿದೆ.–ಶರತ್ ಬಚ್ಚೇಗೌಡ, ಅಧ್ಯಕ್ಷ, ಕಿಯೊನಿಸ್ಕ್
ಕೇಂದ್ರ ಸರ್ಕಾರವೂ ಈ ಕ್ಷೇತ್ರಕ್ಕೆ ಪೂರಕವಾಗಿ ಮುಂಬೈನಲ್ಲಿ ಏಪ್ರಿಲ್ 1ರಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಕ್ರಿಯೇಟೀವ್ ಟೆಕ್ನಾಲಜಿ (ಐಐಸಿಟಿ) ಆರಂಭಿಸುತ್ತಿದೆ.–ಸಂಜಯ್ ಜಾಜು, ಕಾರ್ಯದರ್ಶಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಆ್ಯನಿಮೇಷನ್ ಅವಶ್ಯಕತೆ ಇದ್ದು, ಅದಕ್ಕಾಗಿ ವಿದೇಶಗಳನ್ನು ಅವಲಂಬಿಸಿದ್ದೆವು. ಈಗ ಬೆಂಗಳೂರಿನಲ್ಲೇ ಅದು ಸಾಧ್ಯವಾಗುತ್ತಿದೆ.–ಕಿರಣ್ ಮಜುಂದಾರ್ ಷಾ, ಬಯೊಕಾನ್ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.