ADVERTISEMENT

ಗಣಮೇಳದಲ್ಲಿ ಶಾಂತಿಮಂತ್ರ: ದಶದಿಕ್ಕುಗಳಿಂದ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 21:20 IST
Last Updated 16 ಫೆಬ್ರುವರಿ 2020, 21:20 IST
ಬೆಂಗಳೂರಿನಲ್ಲಿ ಭಾನುವಾರ ಮುರುಘರಾಜೇಂದ್ರ ಬೃಹನ್ಮಠ, ಬಸವಕೇಂದ್ರಗಳು ಮತ್ತು ಬಸವ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ‘ಶಿವಯೋಗ ಸಂಭ್ರಮ - ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ’ದ ಇಷ್ಟ ಲಿಂಗ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ಮುರುಘರಾಜೇಂದ್ರ ಬೃಹನ್ಮಠ, ಬಸವಕೇಂದ್ರಗಳು ಮತ್ತು ಬಸವ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ‘ಶಿವಯೋಗ ಸಂಭ್ರಮ - ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನ’ದ ಇಷ್ಟ ಲಿಂಗ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರು –ಪ್ರಜಾವಾಣಿ ಚಿತ್ರ   

ಬೆಂಗಳೂರು: 12ನೇ ಶತಮಾನದ ಅನುಭವ ಮಂಟಪದಲ್ಲಿ ಮೊದಲ ಬಾರಿಗೆ ಸಮ್ಮಿಳಿತವಾಗಿದ್ದ ‘ಅಸಂಖ್ಯ ಪ್ರಮಥರ ಗಣಮೇಳ’ದ ಶಿವಯೋಗ ಸಂಭ್ರಮವನ್ನು 21ನೇ ಶತಮಾನದಲ್ಲಿ ಮರುಕಳಿಸುವ ಮುರುಘಾ ಶರಣರ ಕನಸು ಭಾನುವಾರ ರಾಜಧಾನಿಯಲ್ಲಿ ಶಾಂತಿಮಂತ್ರದ ಉದ್ಘೋಷದ ನಡುವೆ ನನಸಾಯಿತು.

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರ ನೇತೃತ್ವದಲ್ಲಿ ನಾಡಿನ ಬಸವ ಕೇಂದ್ರಗಳು, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವಜನಾಂಗದ ಮಠಾಧೀಶರ ಸಮ್ಮುಖದಲ್ಲಿ ಸಹಸ್ರಾರು ಭಕ್ತರು ಬೆಳಗಿನಿಂದ ಸಂಜೆಯವರೆಗೆ ನಡೆದ ಜ್ಞಾನದಾಸೋಹದಲ್ಲಿ ಭಾಗವಹಿಸಿದ್ದರು.

ಪ್ರತ್ಯೇಕ ಲಿಂಗಾಯತ ಧರ್ಮದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಮೂರ್ತಿ ಮುರುಘಾ ಶರಣರು, ವೀರಶೈವ ಮತ್ತು ವೈದಿಕ ಮಠಾಧೀಶರೂ ಸೇರಿದಂತೆ ವಿವಿಧ ಸಮುದಾಯಗಳ ಮಠಾಧೀಶರಿಗೆ ಸಮನ್ವಯ ವೇದಿಕೆಯನ್ನು ಕಲ್ಪಿಸಿದರು.

ADVERTISEMENT

ಮಕೂರು ರಸ್ತೆಯ (ಬಿಐಇಸಿ) ನಂದಿ ಗ್ರೌಂಡ್ಸ್‌ನಲ್ಲಿ ಆಯೋಜಿಸಲಾಗಿದ್ದ ಸಮಾವೇಶದಬೆಳಗಿನ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಪ್ರಮುಖವಾಗಿ ಗಮನ ಸೆಳೆದರು.

‘ಇದೊಂದು ಅಭೂತಪೂರ್ವ ಪ್ರಯತ್ನ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶ್ಲಾಘಿಸಿದರು.

ದಾಖಲೆಯ ಸಹಜ ಶಿವಯೋಗ
ಬೆಳಿಗ್ಗೆ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿದರು. ನೊಸಲಿನ ಮೇಲೆ ವಿಭೂತಿ, ಕೊರಳಿಗೆ ಇಷ್ಟಲಿಂಗ ಮತ್ತು ರುದ್ರಾಕ್ಷಿ ಧರಿಸಿದ್ದ 24 ಸಾವಿರ ಭಕ್ತರು ಬೆಳಗಿನ 6 ಗಂಟೆಯಿಂದ 9.30ರ ವರೆಗೆ ಸಹಜ ಶಿವಯೋಗದಲ್ಲಿ ತಲ್ಲೀನರಾಗಿ ದಾಖಲೆ ನಿರ್ಮಿಸಿದರು. ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ದಾಖಲಿಸಿದ ಅಂಕಿ ಅಂಶಗಳ ಪ್ರಕಾರ ‘ಸಹಜ ಶಿವಯೋಗದಲ್ಲಿ 24 ಸಾವಿರ ಭಕ್ತರು ಪಾಲ್ಗೊಂಡಿದ್ದಾರೆ’ ಎಂದು ಪ್ರಕಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.