ADVERTISEMENT

‘ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದ ಗಣೇಶ ಹುಕ್ಕೇರಿ, ಪ್ರಕಾಶ ಹುಕ್ಕೇರಿ’

ಶಾಸಕ ದುರ್ಯೋಧನ ಐಹೊಳೆ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:56 IST
Last Updated 25 ಜನವರಿ 2019, 13:56 IST
   

ಬೆಳಗಾವಿ: ಚಿಕ್ಕೋಡಿ– ಸದಲಗಾ ಶಾಸಕ, ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ ಹಾಗೂ ಅವರ ತಂದೆ, ಸಂಸದ ಪ್ರಕಾಶ ಹುಕ್ಕೇರಿ ಅವರು ಬಿಜೆಪಿ ಸೇರಲು ಬಯಸಿದ್ದರು ಎಂದು ರಾಯಬಾಗ ಶಾಸಕ, ಬಿಜೆಪಿಯ ದುರ್ಯೋಧನ ಐಹೊಳೆ ತಮ್ಮ ಆಪ್ತರೆದುರು ಹೇಳಿರುವ ವಿಡಿಯೊ ವೈರಲ್‌ ಆಗಿದೆ.

‘ಗಣೇಶ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡಬೇಕು ಹಾಗೂ ತಮಗೆ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಬೇಕು ಎನ್ನುವ ಷರತ್ತನ್ನು ಪ್ರಕಾಶ ಹುಕ್ಕೇರಿ ಹಾಕಿದ್ದರು. ಇಬ್ಬರಿಗೂ ಟಿಕೆಟ್‌ ನೀಡಲು ಪಕ್ಷದ ಮುಖಂಡರು ನಿರಾಕರಿಸಿದರು. ಹೀಗಾಗಿ ಅವರ ಮಾತುಕತೆ ಮುರಿದುಬಿತ್ತು’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ಚಿತ್ರೀಕರಣಗೊಂಡಿದೆ.

‘ಕಾಂಗ್ರೆಸ್‌ನಲ್ಲಿ ತನ್ನನ್ನು ಬಿಟ್ಟರೆ ಬೇರಾರೂ ಬಲಿಷ್ಠರಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿದರೆ ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ತನ್ನ ಗೆಲುವು ನಿಶ್ಚಿತ ಎಂದು ಪ್ರಕಾಶ ತಿಳಿದುಕೊಂಡಿದ್ದರು. ಇದಲ್ಲದೇ, ಬಿಜೆಪಿ ಸೇರಿದರೆ ಗಣೇಶಗೆ ಸಚಿವ ಸ್ಥಾನ ಸಿಗುತ್ತದೆಂದು ನಂಬಿದ್ದರು. ಆದರೆ, ಇದ್ಯಾವುದೂ ಸಾಧ್ಯವಾಗಲಿಲ್ಲ’ ಎಂದು ಐಹೊಳೆ ಹೇಳಿದ್ದರು.

ADVERTISEMENT

‘ಪ್ರಕಾಶ ಹುಕ್ಕೇರಿ ಅವರು ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿಲ್ಲ. ಬೇರೆ ಜಿಲ್ಲೆಯ ನಾಯಕರ ಜೊತೆ ಮಾತುಕತೆ ನಡೆಸಿದ್ದರು’ ಎಂದು ಅವರು ತಿಳಿಸಿದ್ದರು.

ಪ್ರತಿಕ್ರಿಯೆ ಪಡೆಯಲು ಮಾಡಿದ ದೂರವಾಣಿ ಕರೆಗಳನ್ನು ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.