ಬೆಂಗಳೂರು: ಭಾರತ ಮತ್ತು ಜರ್ಮನಿಯ ನಾರ್ತ್ ರಿನೆ–ವೆಸ್ಟ್ ಫಾಲಿಯಾ ಪ್ರಾಂತ್ಯದ ನಡುವೆ ತಂತ್ರಜ್ಞಾನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಕಚೇರಿಯನ್ನು 2022 ರ ಆರಂಭದಲ್ಲಿ ಅಧಿಕೃತವಾಗಿ ಆರಂಭಿಸಲಾಗುವುದು ಎಂದು ಆ ಪ್ರಾಂತ್ಯದ ಆರ್ಥಿಕ, ನಾವೀನ್ಯ, ಡಿಜಿಟಲೀಕರಣ ಮತ್ತು ಇಂಧನ ಸಚಿವ ಆಂಡ್ರಿಯಾಸ್ ಪಿಂಕ್ವರ್ಟ್ ಪ್ರಕಟಿಸಿದರು.
ಇದು ಭಾರತ ಮತ್ತು ಜರ್ಮನಿಯ ಕಂಪನಿಗಳಿಗೆ ಹೆಬ್ಬಾಗಿಲಾಗಲಿದೆ ಎಂದು ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ವರ್ಚ್ಯುವಲ್ ಭಾಷಣದಲ್ಲಿ ಈ ವಿಷಯ ತಿಳಿಸಿದರು.
‘ಭಾರತದ ನವೋದ್ಯಮ ಮತ್ತು ಇತರ ಕಂಪನಿಗಳಿಗೆ ತಮ್ಮ ಪ್ರಾಂತ್ಯಕ್ಕೆ ಮುಕ್ತ ಸ್ವಾಗತವಿದೆ. ಭಾರತದಲ್ಲಿ ಬೆಂಗಳೂರು ಮತ್ತು ಕರ್ನಾಟಕ ಹೇಗೆ ತಂತ್ರಜ್ಞಾನದ ತೊಟ್ಟಿಲಾಗಿದೆಯೋ ಹಾಗೆ ಜರ್ಮನಿಯಲ್ಲಿ ನಮ್ಮ ಪ್ರಾಂತ್ಯವು ತಾಂತ್ರಿಕ ನೆಲೆಯಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾರತ ಮತ್ತು ಜರ್ಮನಿ 20 ಒಡಂಬಡಿಕೆಗಳಿಗೆ ಸಹಿ ಹಾಕಿವೆ. ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಐಒಟಿ, ಅನಲಿಟಿಕ್ಸ್, ರೋಬೋಟಿಕ್ಸ್, ಡೇಟಾ ಸೈನ್ಸ್ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯವನ್ನು ಜ್ಞಾನಧಾರಿತ ಸಮಾಜವನ್ನಾಗಿ ಕಟ್ಟಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.