ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ‘ಉಡಾನ್–3’ ಯೋಜನೆಯಡಿ ಮೆ. ಗೋಡಾವತ್ (ಸ್ಟಾರ್ ಏರ್) ಕಂಪನಿಯು ಬೆಳಗಾವಿ–ಇಂದೋರ್–ಬೆಳಗಾವಿ ಮಾರ್ಗದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸೋಮವಾರ ಆರಂಭಿಸಿತು.
ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ‘ಕಂಪನಿಯು ನವದೆಹಲಿ ಮೊದಲಾದ ನಗರಗಳಿಗೆ ವಿಮಾನ ಕಾರ್ಯಾಚರಣೆ ಆರಂಭಿಸಬೇಕು’ ಎಂದು ಕೋರಿದರು.
ವಿಮಾನನಿಲ್ದಾಣ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ, ‘ಇಲ್ಲಿಂದ ನಿತ್ಯವೂ 26 ಕಾರ್ಯಾಚರಣೆ (ಆಗಮನ ಮತ್ತು ನಿರ್ಗಮನ) ನಡೆಯುತ್ತಿದೆ. ಪ್ರಮುಖ 8 ನಗರಗಳಾದ ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ತಿರುಪತಿ, ಮೈಸೂರು ಹಾಗೂ ಇಂದೋರ್ಗೆ ವಿಮಾನ ಸಂಪರ್ಕವಿದೆ. ಸ್ಟಾರ್ ಏರ್ ವಿಮಾನ (ಒಜಿ 121/122) ವಾರದಲ್ಲಿ 3 ದಿನಗಳು ಅಂದರೆ ಸೋಮವಾರ, ಮಂಗಳವಾರ ಹಾಗೂ ಬುಧವಾರ ಕಾರ್ಯಾಚರಣೆ ನಡೆಸುತ್ತದೆ. ಮಧ್ಯಾಹ್ನ 1.10ಕ್ಕೆ ಇಂದೋರ್ಗೆ ನಿರ್ಗಮಿಸಲಿದೆ. ಅಲ್ಲಿಂದ ಬೆಳಗಾವಿಗೆ ಸಂಜೆ 4.45ಕ್ಕೆ ಹೊರಡಲಿದೆ’ ಎಂದು ಮಾಹಿತಿ ನೀಡಿದರು.
‘50 ಸೀಟುಗಳ ವಿಮಾನ (ಎಂಬ್ರಾರ್ ಏರ್ಕ್ರಾಫ್ಟ್) ಇದಾಗಿದೆ. ಮೊದಲ ದಿನವಾದ ಸೋಮವಾರ ಇಲ್ಲಿಂದ ಇಂದೋರ್ಗೆ 40 ಪ್ರಯಾಣಿಕರು ಪ್ರಯಾಣಿಸಿದರು’ ಎಂದು ತಿಳಿಸಿದರು.
ಗೋಡಾವತ್ ಸಮೂಹದ ನಿರ್ದೇಶಕ ನಿಲೇಶ್ ಬಾಗಿ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರುತುರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.