ಅಫಜಲಪುರ (ಕಲಬುರ್ಗಿ ಜಿಲ್ಲೆ):ತಾಲ್ಲೂಕಿನ ಹಾವನೂರು ಗ್ರಾಮದ ಬಾಲಕಿಯ ಕಾಣೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಗ್ರಾಮದ ಹೊರವಲಯದಲ್ಲಿ ಬುರುಡೆಯೊಂದು ಪತ್ತೆಯಾಗಿದ್ದು, ಅದೇ ಸ್ಥಳದಲ್ಲಿ ಬಾಲಕಿಯ ಬಟ್ಟೆ ಸಹ ದೊರೆತಿವೆ.ಬಾನಾಮತಿ ಮಾಡುವವರೇ ನರಬಲಿ ನೀಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬೇರೆಬೇರೆ ಸ್ಥಳಗಳಲ್ಲಿ ಎಸೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ನಿಂಗಪ್ಪ ಪೂಜಾರಿ ಅವರ 5 ವರ್ಷದ ಮಗಳು ಶ್ವೇತಾ ಇದೇ 5ರಂದು ಕಾಣೆಯಾಗಿದ್ದಳು. ಪಾಲಕರು ದೇವಲ ಗಾಣಗಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸ್ಥಳ ಪಂಚನಾಮೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ‘ತಲೆಬುರುಡೆ ಬಾಲಕಿಯದ್ದೆ, ಅಲ್ಲವೆ ಎಂಬುದು ಖಚಿತ ಆಗಬೇಕಿದೆ. ಸ್ಥಳದಲ್ಲಿ ಸಿಕ್ಕ ವಸ್ತುಗಳು, ತಲೆಬುರುಡೆ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಖಚಿತವಾಗಿ ಹೇಳಲು ಸಾಧ್ಯ’ ಎಂದರು.
ಅನುಮಾನದ ಹುತ್ತ: ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ‘ನಿಧಿ ಆಸೆಗಾಗಿ ಬಾಲಕಿಯನ್ನು ಬಲಿ ಕೊಡಲಾಗಿದೆ’ ಎಂದು ಕೆಲವರು, ‘ಇದು ಬಾನಾಮತಿ ಮಾಡುವವರ ಕೃತ್ಯ. ಹೀಗೆ ತಲೆಬುರುಡೆ ಉಪಯೋಗಿಸುವುದು ಬಾನಾಮತಿ ಕೆಲಸಕ್ಕೇ’ ಎಂದು ಮತ್ತೆ ಕೆಲವರು ಸಂದೇಹ ವ್ಯಕ್ತಪಡಿಸಿದ್ದಾರೆ.
‘ಹಾವನೂರಿನಲ್ಲಿ ಕದ್ದು– ಮುಚ್ಚಿ ಪ್ರೇಮಿಸುತ್ತಿದ್ದ ಯುವಕ, ಯುವತಿಯನ್ನು ಈ ಬಾಲಕಿ ನೋಡಿದ್ದಳು. ದೊಡ್ಡವರ ಮುಂದೆ ವಿಷಯ ಹೇಳಬಹುದು ಎಂಬ ಕಾರಣಕ್ಕೆ ಅವರೇ ಅಪಹರಿಸಿ, ಕೊಲೆ ಮಾಡಿದ್ದಾರೆ ಎಂದೂ ಅಕ್ಕಪಕ್ಕದ ಮನೆಯವರು ಸಂದೇಹಪಟ್ಟಿದ್ದಾರೆ’ ಎನ್ನುವುದು ಇನ್ನೊಂದು ಮೂಲಗಳ ಮಾಹಿತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.