ADVERTISEMENT

ಗೋಕರ್ಣ ದೇಗುಲ ಮಠಕ್ಕೆ ಹಸ್ತಾಂತರಿಸಲಿ; ಅಖಿಲ ಹವ್ಯಕ ಮಹಾಸಭಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 17:34 IST
Last Updated 5 ಅಕ್ಟೋಬರ್ 2018, 17:34 IST

ಬೆಂಗಳೂರು: ‘ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಬೇಕು’ ಎಂದು ಅಖಿಲ ಹವ್ಯಕ ಮಹಾಸಭಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ, ‘ದೇವಾಲಯದ ನಿರ್ವಹಣೆಯನ್ನು ಶ್ರೀಮಠವೇ ನಿರ್ವಹಿಸಲಿ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಇದನ್ನು ಅಪವಾಖ್ಯಾನಗೊಳಿಸಿ ಸರ್ಕಾರ ಅಕ್ರಮವಾಗಿ ವಶಕ್ಕೆ ಪಡೆದಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಸೆ.7ರಂದು ಇದ್ದ ಯಥಾಸ್ಥಿತಿಯನ್ನು ಮುಂದಿನ ಆದೇಶದವರೆಗೂ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಆದೇಶಿಸಿದೆ. ದೇವಾಲಯದ ಆಡಳಿತವು ಸೆ.19ರವರೆಗೂ ಮಠದ ನಿರ್ವಹಣೆಯಲ್ಲೇ ಇತ್ತು ಎಂಬುದು ಗಮನಾರ್ಹ. ಆದರೂ, ಕೆಲವು ವಿವೇಕಶೂನ್ಯರು ಅಪವ್ಯಾಖ್ಯಾನ ಮಾಡುತ್ತಿದ್ದಾರೆ. ಇದನ್ನು ಮಹಾಸಭಾ ಖಂಡಿಸುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಸುಪ್ರೀಂ ಕೋರ್ಟ್‌ ಆದೇಶವನ್ನು ಯಥಾವತ್ತಾಗಿ ಪಾಲಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ನ್ಯಾಯಪೀಠದ ಆದೇಶಕ್ಕೆ ಅಗೌರವ ಸಲ್ಲಿಸದೇ, ಯಥೋಚಿತವಾಗಿ ಮಠಕ್ಕೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದೆ.

‘ಹೇಳಿಕೆ ಖಂಡನಾರ್ಹ’: ‘ಹಿರಿಯ ವಕೀಲ ಎಸ್.ಎಸ್‌.ನಾಗಾನಂದ ಅವರ ಹೇಳಿಕೆ ಖಂಡನೀಯ. ರಾಮಚಂದ್ರಾಪುರ ಮಠ, ರಾಘವೇಶ್ವರ ಭಾರತೀ ಶ್ರೀಗಳ ಬಗ್ಗೆ ಅಥವಾ ಸಮಾಜದ ಬಗ್ಗೆ ಮಾತನಾಡುವಾಗ ಅವರು ಜಾಗ್ರತೆ ವಹಿಸಬೇಕು’ ಎಂದೂ ಗಿರಿಧರ ಕಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಅವರ ಆಧಾರ ರಹಿತ ಹೇಳಿಕೆಗಳಿಂದ ಸಮಸ್ತ ಹವ್ಯಕ ಸಮಾಜಕ್ಕೆ ನೋವುಂಟಾಗಿದೆ. ಈ ರೀತಿಯ ಮಾತುಗಳನ್ನಾಡಿದರೆ ಅವರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.