ADVERTISEMENT

‘ದಲಿತರು ನಿರ್ಧರಿಸಿದರೆ ಸರ್ಕಾರ ಪತನ’

ಮಾದಿಗ ಚೈತನ್ಯ ರಥಯಾತ್ರೆ ಸಮಿತಿಯ ರಾಜ್ಯ ಮುಖಂಡ ಹೆಣ್ಣೂರು ಲಕ್ಷ್ಮಿನಾರಾಯಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:17 IST
Last Updated 8 ಫೆಬ್ರುವರಿ 2021, 17:17 IST

ಚಿತ್ರದುರ್ಗ: ‘ದಲಿತರು ನಿರ್ಧರಿಸಿದರೆ ಅಧಿಕಾರದಲ್ಲಿ ಇರುವವರನ್ನೇ ಕೆಳಗಿಳಿಸುವ ಶಕ್ತಿ ಹೊಂದಿದ್ದಾರೆ’ ಎಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿ ಜಾರಿ ಹೋರಾಟ ಸಮಿತಿ ರಾಜ್ಯ ಮುಖಂಡ ಹೆಣ್ಣೂರು ಲಕ್ಷ್ಮಿನಾರಾಯಣ ಹೇಳಿದರು.

ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿಗೆ ಹಾಗೂ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಮಾದಿಗ ಚೈತನ್ಯ ರಥಯಾತ್ರೆ ಸೋಮವಾರ ಕೋಟೆನಗರಿ ಪ್ರವೇಶಿಸಿದ ವೇಳೆ ಅವರು ಮಾತನಾಡಿದರು.

‘ಮಾರ್ಚ್ 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಮಾದಿಗ ವಿರಾಟ್‌ ಶಕ್ತಿ ಪ್ರದರ್ಶನಕ್ಕೆ ಸಮುದಾಯದ ಜನ ಸುನಾಮಿಯಂತೆ ರಾಜ್ಯದ ವಿವಿಧೆಡೆಯಿಂದ ಹರಿದು ಬರಲಿ ದ್ದಾರೆ. ಅಂದಾಜು 10 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

‘ಲಿಂಗಾಯತ ಸಮುದಾಯದಿಂದಲ್ಲ; ಮಾದಿಗ ಸಮುದಾಯದಿಂದ ಅಧಿಕಾರ ಕಳೆದುಕೊಂಡೆ ಎಂದು ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ದುರಂಹಕಾರದ ಮಾತು ಗಳಿಂದಲೇ ಅವರು ಅಧಿಕಾರ ಕಳೆದು ಕೊಂಡರು’ ಎಂದರು.

‘ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮುದಾಯವನ್ನು ವಂಚಿಸಿದ್ದಾರೆ’ ಎಂದು ಹೇಳಿದರು.

‘ಕುರುಬ ಸಮುದಾಯದ ಹೋರಾಟಕ್ಕೆ ಸಚಿವ ಈಶ್ವರಪ್ಪ, ವಾಲ್ಮೀಕಿ ಸಮುದಾಯದ ಹೋರಾಟಕ್ಕೆ ಸಚಿವರಾದ ಬಿ. ಶ್ರೀರಾಮುಲು, ಜಾರಕಿಹೊಳಿ ಬೆಂಬಲಿಸುತ್ತಾರೆ. ಆದರೆ, ಸಮುದಾಯದಿಂದ ಉಪಮುಖ್ಯಮಂತ್ರಿ ಆಗಿರುವ ಗೋವಿಂದ ಕಾರಜೋಳ ಏಕೆ ಹೋರಾಟಕ್ಕೆ ಬೀದಿಗಿಳಿದಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.