ಬೆಂಗಳೂರು: ‘ಮುಡಾ ಹಗರಣ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಮನವಿ ಮಾಡಿದವರ ಹಿನ್ನೆಲೆಯನ್ನು ರಾಜ್ಯಪಾಲರು ಪರಿಶೀಲಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಶನಿವಾರ ಆಗ್ರಹಿಸಿದರು.
ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎಲ್. ಶಂಕರ್, ಮುಖ್ಯಮಂತ್ರಿಯ ಸಲಹೆಗಾರ ಬಿ.ಆರ್. ಪಾಟೀಲ, ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ–ಜೆಡಿಎಸ್ನವರ ರೀತಿಯಲ್ಲಿ ರಾಜ್ಯಪಾಲರು ನಡೆದುಕೊಂಡರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ’ ಎಂದಿದ್ದಾರೆ.
‘ಮುಡಾ ವಿಷಯ ಕುರಿತು ಸಿ.ಎಂ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ 50:50 ಅನುಪಾತದಲ್ಲಿ ನಿವೇಶನ ನೀಡಿರುವುದು ತಪ್ಪಾಗಿದ್ದರೆ, ಯಾರ ಕಾಲದಲ್ಲಿ ಆಗಿದೆ ಎಂಬುದನ್ನು ನೋಡಬೇಕು. ಅದಕ್ಕೆ ಕಾರಣರಾದವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಬಿ.ಎಲ್. ಶಂಕರ್ ಒತ್ತಾಯಿಸಿದರು.
ಬಿ. ಆರ್.ಪಾಟೀಲ ಅವರು, ‘ಹಿಂದೆ ಎರಡು ಬಾರಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿದ್ದ ಬಿಜೆಪಿ, ಮೂರನೇ ಬಾರಿಯೂ ಅದೇ ಕೆಲಸಕ್ಕೆ ಕೈ ಹಾಕಿದೆ. ನಾವು ಬಿಜೆಪಿಯ ಬೆದರಿಕೆಗಳಿಗೆ ಜಗ್ಗುವುದಿಲ್ಲ’ ಎಂದರು.
ಎಲ್. ಹನುಮಂತಯ್ಯ ಮತ್ತು ಉಗ್ರಪ್ಪ ಅವರೂ ಬಿಜೆಪಿ ವಿರುದ್ಧ ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.