ADVERTISEMENT

ಆಲಮಟ್ಟಿಯ ಉದ್ಯಾನ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ರಾಜ್ಯಪಾಲರು

​ಪ್ರಜಾವಾಣಿ ವಾರ್ತೆ
Published 24 ಮೇ 2022, 16:54 IST
Last Updated 24 ಮೇ 2022, 16:54 IST
ಆಲಮಟ್ಟಿಯ ಲೇಸರ್ ಫೌಂಟೇನ್ ಅನ್ನು ಮಂಗಳವಾರ ರಾತ್ರಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವೀಕ್ಷಿಸಿದರು
ಆಲಮಟ್ಟಿಯ ಲೇಸರ್ ಫೌಂಟೇನ್ ಅನ್ನು ಮಂಗಳವಾರ ರಾತ್ರಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವೀಕ್ಷಿಸಿದರು   

ಆಲಮಟ್ಟಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಂಗಳವಾರ ರಾತ್ರಿ ಆಲಮಟ್ಟಿಯ ಉದ್ಯಾನಗಳ ಸಮುಚ್ಛಯದಲ್ಲಿನ ವಿವಿಧ ಉದ್ಯಾನಗಳನ್ನು ಹಾಗೂ ಜಲಾಶಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೊಘಲ್ ಉದ್ಯಾನದ ಸ್ಥಿರ ಕಾರಂಜಿ, ಲೇಸರ್ ಫೌಂಟೇನ್‌ನಲ್ಲಿನ ಹಾಡುಗಳಿಗೆ ತಕ್ಕಂತೆ ನೀರಿನ ಪರದೆಯ ಮೇಲೆ ಮೂಡಿ ಬಂದ ಅದ್ಭುತ ಚಿತ್ರಗಳು, ಹಾಡುಗಳು, ಸಂಗೀತ ಕಾರಂಜಿಯ ವಿವಿಧ ಹಾಡುಗಳಿಗೆ ನೃತ್ಯ ಮಾಡುವ ಕಾರಂಜಿಗಳನ್ನು ವೀಕ್ಷಿಸಿದರು. ಸುಮಾರು ಒಂದೂವರೆ ಕಿ.ಮೀ ಉದ್ಯಾನದಲ್ಲಿ ನಡೆದರು. ಪ್ರತಿ ಹೆಜ್ಜೆಗೂ ಕೆಬಿಜೆಎನ್ ಎಲ್ ಅಧಿಕಾರಿಗಳ ಕಡೆಯಿಂದ ಮಾಹಿತಿ ಪಡೆದರು. ಉದ್ಯಾನದಲ್ಲಿನ ಹಸುರೀಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂತಿಮವಾಗಿ ಎಂಟ್ರನ್ಸ್ ಪ್ಲಾಜಾ ಅಳವಡಿಸಿರುವ ತ್ರೀಡಿ ಪ್ರೊಜೆಕ್ಶನ್ ಮ್ಯಾಪಿಂಗ್ ವೀಕ್ಷಿಸಿದರು.

ಹುಬ್ಬಳ್ಳಿಯಿಂದ ರಸ್ತೆ ಮೂಲಕ ಆಲಮಟ್ಟಿ ಜಲಾಶಯದ ಬಲಭಾಗದ ಸೀತಿಮನಿ ಗುಡ್ಡದಲ್ಲಿರುವ ಕೆಎಚ್‌ಟಿಡಿಸಿ ಪ್ರವಾಸಿ ಮಂದಿರಕ್ಕೆ ಬಂದ ರಾಜ್ಯಪಾಲರು, ಅಲ್ಲಿಂದ ಆಲಮಟ್ಟಿಯ ಜಲಾಶಯದ ಮೂಲಕ ಎಡಭಾಗದ ಉದ್ಯಾನಗಳಿಗೆ ಭೇಟಿ ನೀಡಿದಾಗ ರಾತ್ರಿ 9 ಗಂಟೆ ಆಗಿತ್ತು. ಅವರಿಗಾಗಿಯೇ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಎಲ್ಲಾ ಉದ್ಯಾನ ವೀಕ್ಷಿಸಿ ಹೊರಟಾಗ ಸಮಯ 10.30 ಆಗಿತ್ತು. ರಾತ್ರಿ ಅವರು ಕೆಎಚ್‌ಟಿಡಿಸಿ ಪ್ರವಾಸಿ ಮಂದಿರದಲ್ಲಿಯೇ ತಂಗಿದ್ದಾರೆ.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನಿಲಕುಮಾರ್‌, ಎಸ್ಪಿ ಲೋಕೇಶ ಜಗಲಾಸರ, ಮುಖ್ಯ ಎಂಜಿನಿಯರ್‌ ಎಚ್‌.ಸುರೇಶ, ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಶಂಕರ, ಭದ್ರತೆಯ ಮುಖ್ಯಸ್ಥ ಸಾಬು ಥಾಮಸ್, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.