ADVERTISEMENT

ಶೇ 20ರಷ್ಟು ಕೃಷಿ ಭೂಮಿ ನಿರುಪಯುಕ್ತ: ಗೋವಿಂದ ಕಾರಜೋಳ

ಸವಳು–ಜವಳು, ಡಿಪಿಆರ್ ಸಿದ್ಧಪಡಿಸಲು ವಾಲ್ಮಿಗೆ ₹25 ಲಕ್ಷ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 12:35 IST
Last Updated 26 ಫೆಬ್ರುವರಿ 2022, 12:35 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬಾಗಲಕೋಟೆ: ರಾಜ್ಯದ ಕೃಷಿ ಭೂಮಿಯಲ್ಲಿ ಸವಳು–ಜವಳು ಸಮಸ್ಯೆ ನಿವಾರಣೆಗೆ ಯೋಜನಾ ವರದಿ ಸಿದ್ಧಪಡಿಸಲು (ಡಿಪಿಆರ್) ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಗೆ (ವಾಲ್ಮಿ) ₹25 ಲಕ್ಷ ಕೊಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಮೂಧೋಳದಲ್ಲಿ ಸವಳು–ಜವಳು ಸಮಸ್ಯೆ ಕುರಿತು ಶನಿವಾರ ಆಯೋಜಿಸಿದ್ದ ರೈತರಿಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅವೈಜ್ಞಾನಿಕ ನೀರಿನ ನಿರ್ವಹಣೆ ಪರಿಣಾಮರಾಜ್ಯದ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಶೇ 20ರಷ್ಟು ಕೃಷಿ ಭೂಮಿ ಇಂದು ಸವಳು–ಜವಳು ಸಮಸ್ಯೆಗೆ ತುತ್ತಾಗಿದೆ. ಬಳಕೆಗೆ ನಿರುಪಯುಕ್ತವಾಗಿರುವ ಅಲ್ಲಿ ಪರ್ಯಾಯ ಆರ್ಥಿಕ ಚಟುವಟಿಕೆ ಆಗಿ ಮೀನು ಪಾಲನೆ ಕೈಗೊಳ್ಳಬಹುದು ಎಂದರು.

ADVERTISEMENT

ಅಲ್ಲಿ ಹುಲ್ಲು ಕಡ್ಡಿ ಕೂಡ ಬೆಳೆಯುವುದಿಲ್ಲ ಎಂದು ರೈತರು ಭೂಮಿ ಮಾರಾಟ ಮಾಡಿ ಕೆಲಸ ಅರಸಿ ಗುಳೇ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಲು ಪರ್ಯಾಯಗಳ ಬಗ್ಗೆ ಅವರಿಗೆ ತಿಳಿಸಿಕೊಡಲು ಹಾಗೂ ಸವಳು–ಜವಳು ಭೂಮಿಗೆ ಮರು ಜೀವ ನೀಡಲು ವಾಲ್ಮಿ ನೇತೃತ್ವದಲ್ಲಿ ಪ್ರಾಯೋಗಿಕ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಅದ‌ಕ್ಕೆ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಜಮಖಂಡಿ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಈ ಕಾರ್ಯದಲ್ಲಿ ವಾಲ್ಮಿ ಜೊತೆಗೆ ನೀರಾವರಿ, ಕೃಷಿ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೈ ಜೋಡಿಸಲಿದ್ದಾರೆ. ಅದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ನಾವು (ಜಲಸಂಪನ್ಮೂಲ ಇಲಾಖೆ) ಒದಗಿಸಲಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.