ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ತಮ್ಮ ಭಾಗದ ಜನರ ಸಮಸ್ಯೆಯನ್ನು ಆಲಿಸದೆ ಕೊರೊನಾ ಭೀತಿಯಿಂದ ನಾಪತ್ತೆಯಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಸೋಂಕನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಗೆ ತಂದು ಎಲ್ಲರೂ ಮನೆಯಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸೂಚಿಸಿದೆ.
ಅದರಂತೆ ಹಲವು ಮಂದಿಗೆ ಕೆಲಸವಿಲ್ಲದೇ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಪಡಿತರ ಅಕ್ಕಿ, ಗೋಧಿಗಳನ್ನು ಪಡೆದು ಜೀವನ ಸಾಗಿಸುತ್ತಿದ್ದಾರೆ. ಕೆಲವರಿಗೆ ಪಡಿತರ ಚೀಟಿ ಇಲ್ಲದೆ ನ್ಯಾಯಬೆಲೆ ಅಂಗಡಿಯಲ್ಲಿ ವಸ್ತುಗಳು ಸಿಗದೆ ಕಂಗಲಾಗಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಕೆಲವು ವಾರ್ಡುಗಳಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಇತ್ತ ಗಮನವೇ ಹರಿಸಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಲಾಕ್ಡೌನ್ ಆದಾಗಿನಿಂದ ಕೆಲವು ವಾರ್ಡ್ಗಳ ಸದಸ್ಯರು ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಮತ ಕೊಟ್ಟು ಗೆಲ್ಲಿಸಿದ ಮತದಾರರ ಸಮಸ್ಯೆಯನ್ನೇ ಆಲಿಸದ ಇವರು ತಮ್ಮ ಪಾಡಿಗೆ ಆರಾಮವಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾ.ಪಂ.ನ ಸದಸ್ಯರು ತಮ್ಮ ವಾರ್ಡಿನ ಜನರೊಂದಿಗೆ ನಿಕಟ ಸಂಪರ್ಕ ಹೊಂದಿ ಯಾರು ಕಡುಬಡವರು, ಯಾರಿಗೆ ಪಡಿತರ ಚೀಟಿ ದೊರೆತ್ತಿಲ್ಲ, ಯಾವ ಮನೆಯಲ್ಲಿ ವಿಕಲಚೇತನರು, ಅನಾರೋಗ್ಯ ಪೀಡಿತರು, ವಯೋವೃದ್ಧರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಕಲೆಹಾಕಬೇಕು. ಆದರೆ ಇಲ್ಲಿನ ಗ್ರಾಮ ಪಂಚಾಯಿತಿ ಕೆಲವು ಸದಸ್ಯರುಗಳು ಜನಸಂಪರ್ಕದಿಂದಲೇ ದೂರವಿದ್ದಾರೆ.
ಕನಿಷ್ಟ ಮಾನವೀಯ ನೆಲೆಯಿಂದಲ್ಲಾದರೂ ಇಂತವರಿಗೆ ಸರ್ಕಾರದ ಸೌಲಭ್ಯ ದೊರಕಿಸಲು ಮುಂದೆ ಬರಬೇಕು. ಅದರ ಆ ಬಗ್ಗೆ ತಲೆಕೆಡಿಸಿಕೊಳ್ಳದ ಸದಸ್ಯರ ಈ ನಿಲುವಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.