ADVERTISEMENT

ಕ್ಷುಲ್ಲಕ ಕಾರಣಕ್ಕೆ ಜ್ಯೋತಿಷಿಯನ್ನು ಕೊಂದ ದುಷ್ಕರ್ಮಿಗಳ ಗುಂಪು

ಹಲಕರ್ಟಿ: ಭಜಿ ತಿನ್ನುವ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ಗ್ರಾಮದಲ್ಲಿ ಬೀಡು ಬಿಟ್ಟ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 17:53 IST
Last Updated 6 ನವೆಂಬರ್ 2020, 17:53 IST
ಸುರೇಶ ವಾಸ್ಟರ್
ಸುರೇಶ ವಾಸ್ಟರ್   

ವಾಡಿ (ಕಲಬುರ್ಗಿ):ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಶುಕ್ರವಾರ ಗುಂಪೊಂದು ಜ್ಯೋತಿಷಿ ಸುರೇಶ ವಾಸ್ಟರ್ (58) ಅವರನ್ನು ಹೊಡೆದು ಕೊಲೆ ಮಾಡಿದೆ.

ಹಲಕರ್ಟಿ ಗ್ರಾಮದ ಸುರೇಶ, ತೆಲಂಗಾಣದ ರಾಜಕೋಟ ಪಟ್ಟಣ ದಲ್ಲಿ ಜ್ಯೋತಿಷ್ಯ ಹೇಳುವ ಕೆಲಸ ಮಾಡುತ್ತಿದ್ದರು. ಹೊಲದ ಕೆಲಸವಿದ್ದ ಕಾರಣ ಈಚೆಗಷ್ಟೇ ಗ್ರಾಮಕ್ಕೆ ಮರಳಿದ್ದರು.

ಆರೋಪಿಗಳಾದ ಸಯ್ಯದ್‌ ಮಿಶಾ ಪಟೇಲ್‌ (43), ಸಯ್ಯದ್‌ ಅಜರ್‌ ಇಕ್ಬಾಲ್‌ ಪಟೇಲ್‌ (24), ಸಯ್ಯದ್‌ ಮಜರ್‌ ಇಕ್ಬಾಲ್‌ ಪಟೇಲ್‌ (30), ಮೊಹಮದ್ ಸೋಹೈಲ್ ಹುಸೇನಸಾಬ್‌ ನದಾಫ (20), ಮಹಮದ್‌ ಮುಸ್ತಫಾ ಹಾಜಿಭಾಯಿ ಬಾಗವಾನ‌ (20), ಮಹಮದ್‌ ಜುಬೇರ್‌ ಮೊಹಿದ್ದೀನ್ ಸಾಬ್‌ ಬಾಗವಾನ (20), ಮಡೇಬ್‌ಅಲಿ ಹಾಜಿಸಾಬ್‌ ಖುರೇಷಿ (30), ಮಹಮದ್‌ ಶಾರೂಖ್‌ ಲಾಲ್‌ಅಹ್ಮದ್‌ ತಾಳಿಕೋಟೆ (22) ಬಂಧಿತರು. 32 ವರ್ಷದ ಇನ್ನೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತ ಅಂಗವಿಕಲ ಎಂದು ‍ಪೊಲೀಸರು ಹೇಳಿದ್ದಾರೆ.

ADVERTISEMENT

ನಡೆದಿದ್ದೇನು?: ‘ಹಲಕರ್ಟಿ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಹೋಟೆಲಿನಲ್ಲಿ ಶುಕ್ರವಾರ ಮಧ್ಯಾಹ್ನ ಜ್ಯೋತಿಷಿ ಸುರೇಶ ಭಜಿ ತಿನ್ನುತ್ತಿದ್ದರು. ಅದೇ ಸಮಯಕ್ಕೆ ಪ್ರಾರ್ಥನೆ ಮುಗಿಸಿ ಹೋಟೆಲ್‌ಗೆ ಬಂದ ಯುವಕರು, ಜ್ಯೋತಿಷಿ ಸುರೇಶ ತಿನ್ನುತ್ತಿದ್ದ ಭಜಿ ತಟ್ಟೆಗೆ ಕೈ ಹಾಕಿದರು. ಇದರಿಂದ ಕೋಪ‍ಗೊಂಡ ಜ್ಯೋತಿಷಿ, ಯುವಕರನ್ನು ಕಟುಶಬ್ದಗಳಲ್ಲಿ ನಿಂದಿಸಿದರು. ಮಾತಿಗೆ ಮಾತು ಬೆಳೆದು, ಯುವಕರ ಗುಂಪು ಸುರೇಶ ಅವರನ್ನು ಹೋಟೆಲ್‌ನಿಂದ ಬೇರೆಡೆಗೆ ಹೊತ್ತುಕೊಂಡು ಹೋಯಿತು. ರಸ್ತೆ ಮಧ್ಯದಲ್ಲೇ ಸುರೇಶ ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿತು. ಅವರು ಸ್ಥಳದಲ್ಲೇ ಪ್ರಾಣ ಬಿಟ್ಟರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶವವನ್ನು ಅವರ ಮನೆಗೆ ತಂದು ಎಸೆದ ಆರೋ‍ಪಿಗಳು ಸ್ಥಳದಿಂದ ಪರಾರಿಯಾದರು ಎಂದು ಜ್ಯೋತಿಷಿ ಕುಟುಂಬ ದೂರಿದೆ.‌ ‘ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಮುಖಂಡ, ಮೃತನ ಸಂಬಂಧಿ ಜಗದೀಶ ಸಿಂಧಿಯಾ
ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ವಾತಾವರಣ ಪ್ರಕ್ಷುಬ್ಧವಾಗಿದ್ದು, ಪೊಲೀಸರು ಬೀಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.