ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ವಾರ್ಷಿಕ ₹85 ಸಾವಿರ ಕೋಟಿಯಿಂದ ₹2.5 ಲಕ್ಷ ಕೋಟಿ ವರೆಗೆ ವರಮಾನ ನಷ್ಟವಾಗಲಿದೆ. ಈ ನಷ್ಟವನ್ನು ತುಂಬಿ ಕೊಡಬೇಕು ಎಂದು ಕರ್ನಾಟಕ ಸೇರಿ ಎಂಟು ರಾಜ್ಯಗಳು ಹಕ್ಕೊತ್ತಾಯ ಮಂಡಿಸಿವೆ.
ಸಮಾನ ಮನಸ್ಕ ರಾಜ್ಯಗಳ ಹಣಕಾಸು ಸಚಿವರು ಶುಕ್ರವಾರ ಇಲ್ಲಿ ಸಭೆ ಸೇರಿ ಜಿಎಸ್ಟಿ ಸರಳೀಕರಣದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದರು. ತಮ್ಮ ರಾಜ್ಯಗಳ ಹಿತ ರಕ್ಷಿಸಲು ಸೆಪ್ಟೆಂಬರ್ 3 ಮತ್ತು 4ರಂದು ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಡಲು ತೀರ್ಮಾನಿಸಿದರು.
2017ರಲ್ಲಿ ಜಿಎಸ್ಟಿ ವ್ಯವಸ್ಥೆ ಜಾರಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ₹25 ಸಾವಿರ ಕೋಟಿಯಿಂದ ₹30 ಸಾವಿರ ಕೋಟಿಯಷ್ಟು ನಷ್ಟ ಉಂಟಾಯಿತು. ವರಮಾನ ನಷ್ಟ ಸರಿದೂಗಿಸಲು ರಾಜ್ಯಗಳಿಗೆ ಐದು ವರ್ಷ ಪರಿಹಾರ ನೀಡಲಾಯಿತು. ಪರಿಹಾರ ವ್ಯವಸ್ಥೆಯನ್ನು ಇನ್ನಷ್ಟು ವರ್ಷ ಮುಂದುವರಿಸಬೇಕು ಎಂಬ ರಾಜ್ಯದ ಮನವಿಗೆ ಕೇಂದ್ರ ಕಿವಿಗೊಡಲಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಬಂದರೆ ರಾಜ್ಯಕ್ಕೆ ವಾರ್ಷಿಕ ₹15 ಸಾವಿರ ಕೋಟಿ ವರಮಾನ ಖೋತಾ ಆಗಲಿದೆ. ಅದನ್ನು ಕೇಂದ್ರ ತುಂಬಿ ಕೊಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ.
ತೆರಿಗೆ ಹಂಚಿಕೆ ಸೇರಿದಂತೆ ಒಟ್ಟು ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ವರ್ಷಗಳಿಂದ ಆರೋಪಿಸುತ್ತಿದೆ. ಕರ್ನಾಟಕದಿಂದ ಸಂಗ್ರಹವಾಗುವ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆ ಮಾತ್ರ ವಾಪಸ್ ಬರುತ್ತಿದೆ ಎಂದು ದೂರಿದೆ. ಜಿಎಸ್ಟಿ ವ್ಯವಸ್ಥೆ ಸರಳೀಕರಣದಿಂದ ರಾಜ್ಯಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ರಾಜ್ಯ ಸರ್ಕಾರ ಬಲವಾಗಿ ಪ್ರತಿಪಾದಿಸಿದೆ. ಹೀಗಾಗಿ, ರಾಜ್ಯ ಸರ್ಕಾರ ಮುಂಚೂಣಿಯಲ್ಲಿ ನಿಂತು ಸಮಾನ ಮನಸ್ಕರ ರಾಜ್ಯಗಳನ್ನು ಒಗ್ಗೂಡಿಸಿ ಕೇಂದ್ರದ ವಿರುದ್ಧ ಧ್ವನಿ ಎತ್ತಲು ಅಣಿಯಾಗಿದೆ.
ಶೇ 20ರಷ್ಟು ಆದಾಯ ನಷ್ಟ:
‘ಕೇಂದ್ರದ ಆದಾಯದಲ್ಲಿ ಜಿಎಸ್ಟಿ ಪಾಲು ಶೇ 28ರಷ್ಟು ಮಾತ್ರ. ಉಳಿದ ಶೇ 72ರಷ್ಟು ಆದಾಯವನ್ನು ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡಿವಿಡೆಂಟ್ ಹಾಗೂ ವಿವಿಧ ಸೆಸ್ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ 17ರಿಂದ ಶೇ 20ರಷ್ಟು ಆದಾಯ ಗಳಿಸುತ್ತದೆ. ಸೆಸ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ಕೇಂದ್ರ ಸರ್ಕಾರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಆದರೆ, ರಾಜ್ಯಗಳ ಆದಾಯದಲ್ಲಿ ಜಿಎಸ್ಟಿ ಪಾಲು ಶೇ 50ರಷ್ಟು. ಹೀಗಾಗಿ ಅಭಿವೃದ್ಧಿಗಾಗಿ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್ಟಿಯನ್ನೇ ನೆಚ್ಚಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ಆದಾಯದಲ್ಲಿ ಶೇ 20ರಷ್ಟು ನಷ್ಟವಾದರೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಹೊಡೆತ ಬೀಳುತ್ತದೆʼ ಎಂದು ಕರ್ನಾಟಕ ಕಳವಳ ವ್ಯಕ್ತಪಡಿಸಿದೆ.
ಸಭೆಯಲ್ಲಿ ಯಾರೆಲ್ಲ ಭಾಗಿ
*ಕರ್ನಾಟಕದಿಂದ ಕೃಷ್ಣ ಬೈರೇಗೌಡ
*ತಮಿಳುನಾಡಿನ ಹಣಕಾಸು ಸಚಿವ ತಂಗಮ್ ತೆನ್ನರಸು
*ಹಿಮಾಚಲ ಪ್ರದೇಶದ ಹಣಕಾಸು ಸಚಿವ ರಾಜೇಶ್ ಧರ್ಮಾನಿ
*ಜಾರ್ಖಂಡ್ ಹಣಕಾಸು ಸಚಿವ ರಾಧಾ ಕೃಷ್ಣ ಕಿಶೋರ್
*ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ
*ಕೇರಳ ಹಣಕಾಸು ಸಚಿವ ಬಾಲಗೋಪಾಲ್
*ತೆಲಂಗಾಣ ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ
*ಪಶ್ಚಿಮ ಬಂಗಾಳ ಸರ್ಕಾರ ಪರವಾಗಿ ನಿವಾಸಿ ಆಯುಕ್ತರಾದ ಉಜ್ಜೈನಿ ದತ್ತ
ರಾಜ್ಯದ ಆತಂಕವೇನು?
₹1.20 ಲಕ್ಷ ಕೋಟಿ : ರಾಜ್ಯದ ವಾರ್ಷಿಕ ಜಿಎಸ್ಟಿ ಸಂಗ್ರಹ ಪ್ರಮಾಣ
ಶೇ 20: ಜಿಎಸ್ಟಿ ಸರಳೀಕರಣದಿಂದ ರಾಜ್ಯಕ್ಕೆ ಆಗುವ ನಷ್ಟ
₹75 ಸಾವಿರ ಕೋಟಿ : ರಾಜ್ಯದ ಬೇಡಿಕೆಗೆ ಮಣಿದು ಐದು ವರ್ಷಗಳ ಕಾಲ ಪರಿಹಾರ ನೀಡಿದರೆ ಸಿಗುವ ಮೊತ್ತ
(*ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ರಾಜ್ಯ ಎರಡನೇ ಸ್ಥಾನದಲ್ಲಿದೆ)
ಸಮಾನ ಮನಸ್ಕರ ಬೇಡಿಕೆಗಳೇನು?
* ರಾಜ್ಯಗಳ ಆದಾಯ ನಷ್ಟವನ್ನು ಜಿಎಸ್ಟಿ ಪರಿಹಾರ ಸೆಸ್ನಂತಹ ವ್ಯವಸ್ಥೆ ಮೂಲಕ ಸರಿದೂಗಿಸಬೇಕು.
* ಹಾನಿಕಾರಕ ಮತ್ತು ಐಷಾರಾಮಿ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿ ಈ ಆದಾಯವನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ವರ್ಗಾಯಿಸಬೇಕು.
*ರಾಜ್ಯಗಳ ಆದಾಯ ನಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಸಾಲಗಳನ್ನು ಪಡೆಯಬೇಕು. ಈ ಸಾಲವನ್ನು 5 ವರ್ಷಗಳ ನಂತರವೂ ಪರಿಹಾರ ಸೆಸ್ ವಿಸ್ತರಿಸುವ ಮೂಲಕ ಪಾವತಿಸಬೇಕು.
* ರಾಜ್ಯಗಳಿಗೆ ಪರಿಹಾರವನ್ನು 2024- 25ನೇ ಹಣಕಾಸು ವರ್ಷದಿಂದಲೇ ನೀಡಬೇಕು. ವಾರ್ಷಿಕ ಶೇ 14 ದರದಲ್ಲಿ ಪರಿಹಾರ ನೀಡಬೇಕು.
ʼರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಹೊಡೆತʼ
ಜಿಎಸ್ಟಿ ವ್ಯವಸ್ಥೆ ಸ್ಥಿರಗೊಳ್ಳುವವರೆಗೆ ರಾಜ್ಯಗಳಿಗೆ ಜಿಎಸ್ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಜಿಎಸ್ಟಿ ಕೌನ್ಸಿಲ್ ನಮ್ಮ ಮುಂದಿಟ್ಟಿರುವ ತೆರಿಗೆ ಸರಳೀಕರಣ ವ್ಯವಸ್ಥೆಯನ್ನು ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯ ರಕ್ಷಿಸುವಂತಿರಬೇಕು. ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿರಬೇಕೇ ಹೊರತು ಕೆಲವು ಕಂಪೆನಿಗಳಿಗೆ ಮಾತ್ರ ಲಾಭ ಆಗುವಂತಿರಬಾರದುʼ ಎಂದು ಅಭಿಪ್ರಾಯಪಟ್ಟರು.
ʼಪ್ರಸ್ತಾವಿತ ಜಿಎಸ್ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟ ಉಂಟಾದರೆ ಕೇಂದ್ರ ಸರ್ಕಾರಕ್ಕೂ ನಷ್ಟವಾಗಲಿದೆ. ಹೀಗಾಗಿ ಜಿಎಸ್ಟಿ ಸ್ಥಿರಗೊಳ್ಳುವವರೆಗೆ ಕೇಂದ್ರ ಸರ್ಕಾರ ತಮ್ಮ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್ಟಿ ಕೌನ್ಸಿಲ್ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಗಳಿಗೂ ಪರಿಹಾರ ನೀಡಲಿʼ ಎಂದು ಒತ್ತಾಯಿಸಿದರು.
ʼಜಿಎಸ್ಟಿಯನ್ನು ಪರಿಚಯಿಸುವಾಗ ಈ ನೂತನ ತೆರಿಗೆ ವ್ಯವಸ್ಥೆ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಭಾವಿಸಲಾಗಿತ್ತು. ಇದು ನಿಜವಾಗಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದಾಯ ದುಪ್ಪಟ್ಟಾಗಬೇಕಿತ್ತು. ಆದರೆ, ಕಳೆದ 7-8 ವರ್ಷಗಳ ಅನುಭವದಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ಜಿಎಸ್ಟಿಗೆ ಮುನ್ನ ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1ರಷ್ಟು ಇತ್ತು. ಆದರೆ, ಜಿಎಸ್ಟಿ ಜಾರಿಯಾದ ಬಳಿಕ ಈ ಪ್ರಮಾಣ ಈವರೆಗೆ ಶೇ. 6.1 ಕ್ಕೆ ತಲುಪಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್ಟಿ ಕೊಡುಗೆ ಶೇ 5.9 ರಷ್ಟು ಮಾತ್ರ. ಜಿಎಸ್ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟವಾಗಿದೆʼ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.