ಬೆಂಗಳೂರು: ‘ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 3,800 ಸಹಾಯಕ ಪ್ರಾಧ್ಯಾಪಕರ ಮತ್ತು 395 ಪ್ರಾಂಶುಪಾಲರ ಹುದ್ದೆಗಳನ್ನು ಮುಂದಿನ ಮೂರು ತಿಂಗಳೊಳಗೆ ಭರ್ತಿ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು.
ಭಾನುವಾರ ಅವರು ‘ಕರ್ನಾಟಕ ರಾಜ್ಯ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕಂಡರಿ ಎಜುಕೇಶನ್ (ಐಸಿಎಸ್ಇ) ಶಾಲಾ ಕನ್ನಡ ಶಿಕ್ಷಕರ ಸಂಘ’ವನ್ನು ಉದ್ಘಾಟಿಸಿ ಮಾತನಾಡಿದರು.
‘ಸಹಾಯಕ ಪ್ರಾಧ್ಯಾಪಕರ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಶೇ 50ರಷ್ಟು ಹುದ್ದೆಗಳನ್ನು 10 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವಅತಿಥಿ ಉಪನ್ಯಾಸಕರಿಗೆ ಮೀಸಲಿಡುತ್ತೇವೆ. ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ 843 ಹುದ್ದೆಗಳನ್ನು ತುಂಬಲು ಈಗಾಗಲೇ ಅನುಮೋದನೆ ನೀಡಿದ್ದೇನೆ. ಉಳಿದ ಖಾಲಿ ಹುದ್ದೆಗಳ ವಿವರ ನೀಡುವಂತೆ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.
‘ಸರ್ಕಾರವೇ ಕನ್ನಡದ ವಿರುದ್ಧವಿದೆ’
‘ರಾಜ್ಯವನ್ನು ಆಳುವ ಸರ್ಕಾರವೇ ಕನ್ನಡ ಭಾಷೆಯ ವಿರುದ್ಧ ನಿಂತಿದೆ. ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ದಡ್ಡತನ. ಕನ್ನಡವನ್ನು ಎಲ್ಲದಕ್ಕೂ ನಿರ್ಲಕ್ಷಿಸುವಂತಾಗಿದೆ’ ಎಂದು ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಕಿಡಿಕಾರಿದರು.
‘ಇಂಗ್ಲಿಷ್ ಮಾಧ್ಯಮದಿಂದ ಮಕ್ಕಳು ಕುರಿಗಳಾಗುತ್ತಾರೆ ಎಂದು ಚಂದ್ರಶೇಖರ ಕಂಬಾರ ಮತ್ತು ಚಂಪಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದಾರೆ. ಆದರೂ, ಕುಮಾರಸ್ವಾಮಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆ ಆರಂಭಿಸುವುದಾಗಿ ಪಟ್ಟುಹಿಡಿದಿದ್ದಾರೆ. ಇದರಿಂದಾಗುವ ದೂರಗಾಮಿ ಪರಿಣಾಮಗಳ ಬಗ್ಗೆಯೂ ಕೂಲಂಕಷವಾಗಿ ಚಿಂತನೆ ನಡೆಸಬೇಕು’ ಎಂದರು.
‘ಕನ್ನಡ ವಿರೋಧಿ ಸರ್ಕಾರ’
‘ರಾಜ್ಯವನ್ನು ಆಳುವ ಸರ್ಕಾರವೇ ಕನ್ನಡ ಭಾಷೆಯ ವಿರುದ್ಧ ನಿಂತಿದೆ. ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ದಡ್ಡತನ. ಕನ್ನಡವನ್ನು ಎಲ್ಲದಕ್ಕೂ ನಿರ್ಲಕ್ಷಿಸುವಂತಾಗಿದೆ’ ಎಂದು ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಕಿಡಿಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.