ಚಾಮರಾಜನಗರ/ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕು ಕಬ್ಬೆಕಟ್ಟೆ ಗ್ರಾಮದಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ.
ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದ ಅರ್ಚಕ ಶಿವಪ್ಪ, ಗ್ರಾಮದವರಾದ ಬಸವರಾಜು, ಮಾಣಿಕ್ಯ, ಸತೀಶ್, ಮೂರ್ತಿ ಮತ್ತು ಪುಟ್ಟಸ್ವಾಮಿ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ, ಅನುಮತಿ ಇಲ್ಲದೇ ಗುಂಪು ಕೂಡುವುದು (ಐಪಿಸಿ 143), ದೊಂಬಿ (ಐಪಿಸಿ 147), ದರೋಡೆ (ಐಪಿಸಿ 395), ಹಲ್ಲೆ (ಐಪಿಸಿ 323) ಹಾಗೂ ಅಕ್ರಮ ಬಂಧನ (ಐಪಿಸಿ 342),ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅರ್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಬಂಧಿತರು. ಉಳಿದ ನಾಲ್ವರು ತಲೆ ಮರೆಸಿಕೊಂಡಿದ್ದಾರೆ.ಹಲ್ಲೆಗೊಳಗಾದ ಪ್ರತಾಪ್ ಅವರ ಚಿಕ್ಕಪ್ಪನ ಮಗ ಕಾಂತರಾಜು ಅವರು ನೀಡಿರುವ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಬೆಳವಣಿಗೆಗೂ ಮುನ್ನಪ್ರಕರಣದ ಸಂಬಂಧ ’ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಧರ್ಮೇಂದರ್ ಕುಮಾರ್ ಮೀನಾ ಅವರು,‘ಪ್ರತಾಪ್ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಅವರ ತಂದೆ ಠಾಣೆಗೆ ಬಂದು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ್ದರು’ ಎಂದರು.
ಅಮಾನವೀಯ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ‘ದೂರು ಕೊಟ್ಟರೆ, ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ’ ಎಂದು ಹೇಳಿದರು.
ಪ್ರತಾಪ್ ಮೈಸೂರಿನ ನಿವಾಸಿ: ಈ ಮಧ್ಯೆ, ಹಲ್ಲೆಗೊಳಗಾದ ಎಸ್.ಪ್ರತಾಪ್ ಅವರು ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿಯವರಾದರೂ ಅವರು ಮೈಸೂರಿನಲ್ಲಿ ವಾಸವಿದ್ದಾರೆ.38 ವರ್ಷ ವಯಸ್ಸಿನ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರು ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
3ರಂದು ಘಟನೆ, 11ಕ್ಕೆ ದೂರು: ಪ್ರತಾಪ್ ಅವರ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ಜೂನ್ 3ರಂದು ನಡೆದಿತ್ತಾದರೂ, ಈ ಸಂಬಂಧದ ವಿಡಿಯೊ ತುಣುಕು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾಧ್ಯಮಗಳು ಈ ಪ್ರಕರಣದ ಬಗ್ಗೆ ಗಮನ ಸೆಳೆದ ನಂತರ ಕಾಂತರಾಜು ಅವರು ಮಂಗಳವಾರ ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೇವಸ್ಥಾನಕ್ಕೆ ಬಂದಾಗಲೇ ಬಟ್ಟೆ ಇರಲಿಲ್ಲ: ಏತನ್ಮಧ್ಯೆ, ಪ್ರತಾಪ್ ಅವರು ಜೂನ್ 3ರಂದು ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿರುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸ್ವಾಮಿಗೌಡ ಅವರು ಜೂನ್ 7ರಂದು ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ದೇವಸ್ಥಾನದಲ್ಲಿರುವಾಗಲೇ ಪ್ರತಾಪ್ ಅವರ ಮೈಮೇಲೆ ಬಟ್ಟೆಗಳಿರಲಿಲ್ಲ. ಬಟ್ಟೆ ನೀಡಲು ಹೋದರೆ ಗ್ರಾಮಸ್ಥರಿಗೆ ಹೊಡೆಯಲು ಬಂದಿದ್ದು ಮಾತ್ರವಲ್ಲದೇ ಕೆಳಗಡೆಗೆ ತಳ್ಳಿದ್ದಾರೆ. ಎಲ್ಲರ ಮೇಲೂ ರೇಗಾಡಿದಾಗ ಕೈಯನ್ನು ಹಗ್ಗದಲ್ಲಿ ಕಟ್ಟಿ ಒಂದು ಕಡೆ ಕೂರಿಸಿ ಪೊಲೀಸರಿಗೆ ಮಾಹಿತಿ ತಿಳಿಸಲಾಯಿತು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
‘ಪೊಲೀಸ್ ಠಾಣೆಯಲ್ಲಿರುವಾಗ ಪ್ರತಾಪ್ ಅವರ ತಂದೆ ಶಿವಯ್ಯ ಅವರು, ಆತ ಮಾನಸಿಕ ಅಸ್ವಸ್ಥ. ದೂರು ಕೊಡಬೇಡಿ, ದೇವಾಲಯಕ್ಕೆ ಹಾಗಿರುವ ಹಾನಿಯನ್ನು ಸರಿಪಡಿಕೊಡುವುದಾಗಿ ಭರವಸೆ ನೀಡಿದ್ದರಿಂದ ದೂರು ಕೊಟ್ಟಿಲ್ಲ. ಆದರೆ, ಇದುವರೆಗೆ ದುರಸ್ತಿ ಮಾಡಲಾಗಿಲ್ಲ’ ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.
ಕಾಂತರಾಜು ದೂರಿನಲ್ಲಿ ಏನಿದೆ?
ದೇವಸ್ಥಾನ ಅಪವಿತ್ರಗೊಳಿಸಿದ ಎಂಬ ಕಾರಣಕ್ಕೆ ಪ್ರತಾಪ್ನ ಜಾತಿ ನಿಂದನೆ ಮಾಡಿ, ಬೆತ್ತಲೆ ಗೊಳಿಸಿ, ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ಕಾಂತರಾಜು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
‘ಜೂನ್ 2ರಂದು ರಾತ್ರಿ 12ರ ಸುಮಾರಿಗೆ ಮೈಸೂರಿನಿಂದ ಶ್ಯಾನಾಡ್ರಹಳ್ಳಿಗೆ ಪ್ರತಾಪ್ ಸ್ಕೂಟರ್ನಲ್ಲಿ ಬರುತ್ತಿದ್ದಾಗ ರಾಘವಾಪುರದ ಹತ್ತಿರ ದುಷ್ಕರ್ಮಿಗಳು ತಡೆದು ಆತನ ಹತ್ತಿರವಿದ್ದ ಹಣ, ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣೆ ಪಡೆಯಲು ಅವನು ಪಕ್ಕದ ತೋಟಕ್ಕೆ ಹೋಗಿದ್ದಾನೆ. ಅಲ್ಲಿ ರಕ್ಷಣೆ ಸಿಗದಿದ್ದುದರಿಂದ ರಾತ್ರೋ ರಾತ್ರಿ ಕಾಲ್ನಡಿಗೆಯಲ್ಲಿ ಮಾಡ್ರಹಳ್ಳಿ ಹತ್ತಿರವಿರುವ ಕಬ್ಬೆಕಟ್ಟೆ ಪಕ್ಕದ ಶನೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಬೆಳಿಗ್ಗೆ 6 ಗಂಟೆಗೆ ಅಲ್ಲಿಗೆ ಬಂದ ಅರ್ಚಕ ಶಿವಪ್ಪ ಅವರು ಪ್ರತಾಪ್ನನ್ನು ವಿಚಾರಿಸಿ, ಹೊಲೆಯ ಜಾತಿಯವನು ಎಂಬುದು ಗೊತ್ತಾಗುತ್ತಲೇ ಮನೆಗೆ ಹೋಗಿ ಅಣ್ಣನ ಮಗ ಬಸವರಾಜು ಎಂಬುವವರನ್ನು ಕರೆದು, ಮಾಡ್ರಹಳ್ಳಿಗೆ ಹೋಗಿ ಮಾಣಿಕ್ಯ, ಸತೀಶ, ಮೂರ್ತಿ ಎಂಬುವವರನ್ನು ಕರೆದುಕೊಂಡು ಬರಲು ಸೂಚಿಸುತ್ತಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.
‘ಎಲ್ಲರೂ ದೇವಸ್ಥಾನಕ್ಕೆ ಬಂದ ನಂತರ ಶಿವಪ್ಪ ಅವರು, ‘ಇವನು ಹೊಲೆಯ ಜಾತಿಯವನು. ದೇವಸ್ಥಾನದ ಒಳಗೆ ಕುಳಿತು ಅಪವಿತ್ರಗೊಳಿಸಿದ್ದಾನೆ. ಇವನನ್ನು ಬೆತ್ತಲೆಗೊಳಿಸಿ ತೆಂಗಿನ ಮರಕ್ಕೆ ಕಟ್ಟಿಹಾಕಿ ಹೊಡೆಯಿರಿ’ ಎಂದು ಹೇಳಿದ್ದರು. ಉಳಿದವರು ಪ್ರತಾಪ್ಗೆ ಹೊಡೆದು, ಒದ್ದರು. ಮಾಣಿಕ್ಯ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಬಸವರಾಜು ಅವರು ದೊಣ್ಣೆಯಿಂದ ಹೊಡೆದು, ಪ್ರತಾಪ್ನ ಎರಡು ಕೈಗಳನ್ನು ಹಿಂದಕ್ಕೆ ಸೇರಿಸಿ ಹಗ್ಗದಿಂದ ಕಟ್ಟಿದ್ದರು. ಬೆತ್ತಲೆ ಮೆರವಣಿಗೆ ಮಾಡುತ್ತಿರುವ ದೃಶ್ಯವನ್ನು ಸತೀಶ ಮತ್ತು ಮೂರ್ತಿ ಎಂಬುವವರು ಮೊಬೈಲ್ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪುಟ್ಟಸ್ವಾಮಿ ಎಂಬುವವರಿಗೆ ಹೇಳಿಸಿ ಪ್ರತಾಪ್ಗೆ ದೊಣ್ಣೆಯಿಂದ ಹೊಡೆಯಲಾಗಿದೆ’ ಎಂದು ಕಾಂತರಾಜು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.