ADVERTISEMENT

ನೌಕರರ ಮುಷ್ಕರ ಶೀಘ್ರ ಅಂತ್ಯ: ಎಚ್ಎಎಲ್ ವಿಶ್ವಾಸ

ವೇತನ ಪರಿಷ್ಕರಣೆಯಲ್ಲಿ ಅನ್ಯಾಯ ಆಗಿಲ್ಲ: ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 10:54 IST
Last Updated 15 ಅಕ್ಟೋಬರ್ 2019, 10:54 IST
   

ಬೆಂಗಳೂರು: ಹಿಂದೂಸ್ತಾನ್ ಎರೋನಾಟಿಕ್ ಲಿಮಿಟೆಡ್ (ಎಚ್‌ಎಎಲ್) ನೌಕರರಿಗೆ ಹತ್ತು ವರ್ಷಗಳ ಬದಲಿಗೆ ಐದು ವರ್ಷಗಳಲ್ಲಿ ವೇತನ ಪರಿಷ್ಕರಣೆ ಮಾಡಲಾಗುತ್ತಿದ್ದು, ಅವರಿಗೆ ನೀಡುತ್ತಿರುವ ವೇತನ ಅತ್ಯಂತ ಸ್ಪರ್ಧಾತ್ಮಕ ವಾಗಿದೆ. ಒಂದಿಷ್ಟು ಗೊಂದಲಗಳು ಶೀಘ್ರ ನಿವಾರಣೆಯಾಗಿ ನೌಕರರು ಶೀಘ್ರ ಮುಷ್ಕರ ಹಿಂದೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಎಚ್ಎಎಲ್‌ನ ಸಿಬ್ಬಂದಿ ವಿಭಾಗದ ನಿರ್ದೇಶಕ ವಿ. ಎಂ. ಚಮೋಲಾ ಹೇಳಿದರು.

ನೌಕರರು ಎರಡನೇ ದಿನವಾದ ಮಂಗಳವಾರ ಮುಷ್ಕರ ಮುಂದುವರಿಸಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರದಿಂದ ದೈನಂದಿನ ಕೆಲಸಗಳಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿವಿಧ ಕಾರ್ಮಿಕ ಸಂಘಟನೆಗಳು ತಿಳಿಸಿದಂತೆ ಸುದೀರ್ಘ ಅವಧಿಗೆ ಮುಷ್ಕರ ಮುಂದುವರಿಯದು ಎಂಬ ವಿಶ್ವಾಸ ಇದೆ ಎಂದರು.

ಈ ಮುಷ್ಕರದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ಬರುವುದು ನಿಜ. ಆದರೆ ಬಿಕ್ಕಟ್ಟು ಶೀಘ್ರ ಇತ್ಯರ್ಥಗೊಳ್ಳಲಿದೆ. ಹೀಗಾಗಿ ರಕ್ಷಣಾ ಸಚಿವರು ಮಧ್ಯ ಪ್ರವೇಶ ಮಾಡುವ ಅಗತ್ಯ ಬೀಳಲಾರದು ಎಂದರು.

ಆರ್ಥಿಕ ಹಿಂಜರಿತಕ್ಕೂ ಈ ಮುಷ್ಕರಕ್ಕೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ನಿಗದಿಗೊಳಿಸಿದ ನಿಯಮಗಳಂತೆಯೇ ನೌಕರರಿಗೆ ವೇತನ ಪರಿಷ್ಕರಿಸಲಾಗಿದೆ ಎಂದು ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕ ಸಿ. ಬಿ. ಅನಂತಕೃಷ್ಣನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.