ADVERTISEMENT

ನಾನು ಆರೋಗ್ಯವಾಗಿದ್ದೀನಿ: ವದಂತಿಗಳಿಗೆ ಹಂಸಲೇಖ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 7:32 IST
Last Updated 25 ನವೆಂಬರ್ 2021, 7:32 IST
ಸಂಗೀತ ನಿರ್ದೇಶಕ ಹಂಸಲೇಖ
ಸಂಗೀತ ನಿರ್ದೇಶಕ ಹಂಸಲೇಖ   

ಬೆಂಗಳೂರು: ಆರೋಗ್ಯ ವಿಚಾರವಾಗಿ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಸಂಗೀತನಿರ್ದೇಶಕ ಹಂಸಲೇಖ, 'ನಾನು ಆರೋಗ್ಯವಾಗಿದ್ದೀನಿ. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು' ಎಂದು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪ್ರಕಟಣೆಯನ್ನು ಪೋಸ್ಟ್‌ ಮಾಡಿರುವ ಹಂಸಲೇಖ ಅವರು, 'ನನಗೆ ಆರೋಗ್ಯ ತಪ್ಪಿದೆ ಎಂದು ರಾಜ್ಯದಾದ್ಯಂತ ಕರೆಗಳು ಬಂದಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂಬುದು ನನಗೆ ಗೊತ್ತಾಗಿದೆ. ಈ ಪ್ರೀತಿ ಪಡೆಯಲು ತುಂಬಾನೆ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖವನ್ನು ಇಂದು ಅನುಭವಿಸುತ್ತಿದ್ದೀನಿ' ಎಂದು ಹೇಳಿದ್ದಾರೆ.

'ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ. ನಾನು ಕೇಳದೆ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ.' ಎಂದು ಹಂಸಲೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

'ಅಭಿಮಾನ ಆವೇಶವಾಗಬಾರದು. ಆವೇಶ ಅವಗಢಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತೆ ಇರಬೇಕು. ಹಾಡು ಕೇಳಿಸುತ್ತದೆ, ಮುಟ್ಟಿಸುತ್ತದೆ' ಎಂದು ಹಂಸಲೇಖ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಹಂಸಲೇಖ ವಿಚಾರಣೆ ವೇಳೆ ನಟ ಚೇತನ್‌ ಉಪಸ್ಥಿತಿ

ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಗುರುವಾರ ನಡೆಯಲಿರುವ ಹಂಸಲೇಖ ಅವರ ವಿಚಾರಣೆ ವೇಳೆ ಅವರ ಜೊತೆ ಇರಲಿದ್ದೇನೆ ಎಂದು ನಟ ಚೇತನ್‌ ಟ್ವೀಟ್‌ ಮಾಡಿದ್ದಾರೆ.

'ನೆನಪಿರಲಿ: ಇದು ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಟವಾಗಿದ್ದು ಸಂವಿಧಾನದ ವಿರೋಧಿಗಳು ಮತ್ತು ಬ್ರಾಹ್ಮಣ್ಯದ ಶಕ್ತಿಗಳು ಇವನ್ನು ಅಪರಾಧೀಕರಿಸುತ್ತಿದ್ದಾರೆ' ಎಂದು ಚೇತನ್‌ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪ್ರಗತಿಪರ ಚಿಂತಕಿ ಅರುಂಧತಿ ರಾಯ್‌ ಅವರ 'ಲೇಖಕರು ಮನಸ್ಸಿನ ಮಾತುಗಳನ್ನು ಬಾಯಿ ಮುಚ್ಚಿಸುವುದು ದೇಶದ ವಿಷಾದದ ಸಂಗತಿ' ಎಂಬ ಮಾತುಗಳನ್ನು ಚೇತನ್‌ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.