ಬೆಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಕಲ್ಪ ಹಾಗೂ ಸಂಯಮದಿಂದ ಕೊರೊನಾ ವೈರಸ್ ಅನ್ನು ಎದುರಿಸಬೇಕು ಎಂಬ ಪ್ರಧಾನಿಯವರ ಮಾತು ಪಾಲನೆಗೆ ಯೋಗ್ಯವಾಗಿದ್ದು, ಮಾರ್ಚ್ 22 ಭಾನುವಾರದಂದು ಪ್ರಧಾನಿಕರೆ ನೀಡಿರುವ 'ಜನತಾ ಕರ್ಫ್ಯೂ'ವನ್ನು ಬೆಂಬಲಿಸುವ ಮೂಲಕ ಸಾಮಾಜಿಕ ಕರ್ತವ್ಯವನ್ನು ಪಾಲಿಸೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ'ಜನತಾ ಕರ್ಫ್ಯೂ'ವನ್ನು ಬೆಂಬಲಿಸೋಣ ಎಂದು ಅವರು ಶುಕ್ರವಾರ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.
ದೇಶದ ಪ್ರಧಾನಿಗಳು ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರಲ್ಲಿ ಅವರು ಕೊಟ್ಟ ಕರೆ ಸಮಯೋಚಿತವೂ ಮತ್ತು ಆಚರಣೆಯೋಗ್ಯವು ಆಗಿದೆ. ಕೊರೊನಾ ಮಹಾಮಾರಿಗೆ ಮಂತ್ರ ಮತ್ತು ಮದ್ದು ಇಲ್ಲದಿರುವಾಗಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಕಲ್ಪ ಹಾಗೂ ಸಂಯಮದಿಂದ ಎದುರಿಸಬೇಕು ಎಂಬ ಪ್ರಧಾನಿ ಅವರ ಕರೆ ಪಾಲನೆಯೋಗ್ಯವಾಗಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.
65 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರಬರಬಾರದು ಎಂಬ ಪ್ರಧಾನಿಯವರ ಆಗ್ರಹಪೂರ್ವಕ ವಿನಂತಿಯ ಹಿಂದಿರುವ ಕಾಳಜಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆಗಾಗಿ ನಾವು ಮಾರ್ಚ್ 22ರಂದು ಜನತಾ ಕರ್ಫ್ಯೂವನ್ನು ಪಾಲಿಸೋಣ ಹಾಗೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೂ ಗೌರವ ಸಲ್ಲಿಸೋಣ ಎಂದು ದೇವೇಗೌಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.