ಮಂಡ್ಯ: ‘ನಾನು ವೇಗವಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕೆಲಸಕ್ಕೂ ತಡ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಅಧಿಕಾರಿಗಳು ನನ್ನ ವೇಗಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಮಂಗಳವಾರ ಅಸಮಾಧಾನ ಹೊರಹಾಕಿದರು.
‘ರಾಜ್ಯದಲ್ಲಿ ತೆರೆದಿರುವ ಭತ್ತ, ರಾಗಿ ಖರೀದಿ ಕೇಂದ್ರಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದೇನೆ. ಆದರೆ ಅಧಿಕಾರಿಗಳು ಇನ್ನೂ ರೈತರಿಗೆ ಹಣ ಪಾವತಿ ಮಾಡಿಲ್ಲ. ನಿಧಾನಗತಿ ಕೆಲಸದಿಂದ ಜನರಿಗೆ ಸಮಸ್ಯೆಯಾಗಿದೆ. ಹಾಗಾಗಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳು ನನ್ನ ವೇಗಕ್ಕೆ ಬರುವಂತೆ ಸೂಚನೆ ಕೊಡುತ್ತಿದ್ದೇನೆ’ ಎಂದರು.
ಗ್ರಾಮೀಣಾಭಿವೃದ್ಧಿ ಯೋಜನೆಗಳಿಗಾಗಿ ನೀಡಿದ ಅನುದಾನದಲ್ಲಿ ಇನ್ನೂ ₹ 13 ಸಾವಿರ ಕೋಟಿ ಹಣ ಬಾಕಿ ಉಳಿದಿದೆ. ಬಜೆಟ್ನಲ್ಲಿ ಘೋಷಣೆ ಮಾಡದ ಯೋಜನೆಗಳಿಗೆ ಈ ಹಣ ಬಳಸಿಕೊಳ್ಳಲಾಗುವುದು ಎಂದರು.
ಕೆಪಿಟಿಸಿಎಲ್ಗೆ ನೇಮಕ: ‘ಕೆಪಿಟಿಸಿಎಲ್ನಲ್ಲಿ ಖಾಲಿ ಇರುವ 3,646 ಹುದ್ದೆಗಳ ನೇಮಕಾತಿಗೆ ಫೆ. 20ರಂದು ಅಧಿಸೂಚನೆ ಹೊರ
ಡಿಸಲಾಗುವುದು. 94 ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆ, 565 ಸಹಾಯಕ ಎಂಜಿನಿಯರ್ ಹುದ್ದೆ, 28 ಸಹಾಯಕ ಎಂಜಿನಿಯರ್ (ಕಾಮಗಾರಿ), 570 ಕಿರಿಯ ಎಂಜಿನಿಯರ್ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.