ADVERTISEMENT

ಮೀಸಲಾತಿ ಪ್ರಮಾಣ ಹೆಚ್ಚಿಸುವುದರಿಂದ ಬಿಜೆಪಿಗೆ ರಾಜಕೀಯ ಲಾಭವಾಗದು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 12:49 IST
Last Updated 8 ಅಕ್ಟೋಬರ್ 2022, 12:49 IST
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ   

ಮೈಸೂರು: ‘ಪರಿಶಿಷ್ಟರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದರಿಂದ ಆಡಳಿತಾರೂಢ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ರಾಜಕೀಯವಾಗಿ ಯಾವುದೇ ಲಾಭವಾಗುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಮೀಸಲಾತಿ ಹೆಚ್ಚಿಸಿದ್ದರಿಂದ ತಮಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗದು’ ಎಂದರು.

‘ನ್ಯಾ.ಎಚ್‌.ಎನ್.ನಾಗಮೋಹನದಾಸ್ ಎರಡು ವರ್ಷಗಳ ಹಿಂದೆಯೇ ವರದಿ ಕೊಟ್ಟಿದ್ದರು. ಚುನಾವಣೆ ಸಮೀಪಿಸುತ್ತಿರುವ ಈಗ ಜಾರಿಗೆ ಮುಂದಾಗಿದ್ದಾರೆ. ಅದರ ಅರ್ಥವೇನು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ರಾಜಕೀಯ ಮುಖಂಡರೇ ತಮ್ಮ ಅನುಕೂಲಕ್ಕಾಗಿ ಮೀಸಲಾತಿ ಹೋರಾಟವನ್ನು ಹುಟ್ಟು ಹಾಕಿದ್ದಾರೆ. ಪಂಚಮಸಾಲಿ ಲಿಂಗಾಯತ ಸಮಾಜ, ಕುರುಬ ಸಮಾಜದವರೂ ಬೇಡಿಕೆ ಮಂಡಿಸಿದ್ದಾರೆ. ಮೀಸಲಾತಿ ಹೆಚ್ಚಿಸುವ ಭರದಲ್ಲಿ ಸರ್ಕಾರವು ಜೇನುಗೂಡಿಗೆ ಕಲ್ಲು ಎಸೆಯುತ್ತಿದೆ. ಮುಂದೊಂದು ದಿನ ಅದೇ ಅವರಿಗೆ ತಿರುಗುಬಾಣವಾಗುತ್ತದೆ’ ಎಂದರು.

‘ರೈಲುಗಳ ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ತಂತ್ರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಹೆಸರು ಬದಲಿಸಿದಾಕ್ಷಣ ಜನರ ಜೀವನದಲ್ಲಿ ಬದಲಾವಣೆ ಅಥವಾ ಸುಧಾರಣೆ ಆಗುವುದಿಲ್ಲ. ಆಯಾ ಕಾಲಕ್ಕೆ ಈ ರೀತಿಯ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ‌. ಇದು ಕೂಡ ಮತ ಬ್ಯಾಂಕ್‌ ಕಾಪಾಡಿಕೊಳ್ಳುವ ಒಂದು ಭಾಗ’ ಎಂದು ವಿಶ್ಲೇಷಿಸಿದರು.

‘ಕೇಂದ್ರ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ, ಇಂಗ್ಲಿಷ್‌ಗೆ ಮಾತ್ರ ಅವಕಾಶ ಕೊಡುತ್ತಿರುವುದು ಖಂಡನೀಯ. ಇದು ಕನ್ನಡಿಗರಿಗೆ ಮಾತ್ರವಲ್ಲ; ‍ಪ್ರಾದೇಶಿಕ ಭಾಷೆಗಳವರಿಗೆಲ್ಲರಿಗೂ ಮಾಡುವ ಅವಮಾನ. ವ್ಯವಸ್ಥಿತವಾಗಿ ಹಿಂದಿಯನ್ನು ಹೇರುವುದೂ ಆಗಿದೆ. ಇದು ಪ್ರಾದೇಶಿಕ ಭಾಷೆಗಳಿಗೆ ಅಪಾಯಕಾರಿಯಾದುದು’ ಎಂದರು.

‘ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆ ಅಥವಾ ಬಿಜೆಪಿಯ ವಿಜಯಯಾತ್ರೆಯಿಂದಾಗಲಿ ಜೆಡಿಎಸ್‌ಗೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.