ಬೆಂಗಳೂರು: ‘ದೃಶ್ಯ ಮಾಧ್ಯಮಗಳು ಇಂದು ನಕಾರಾತ್ಮಕ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡುತ್ತಿವೆ. ಇದರಿಂದ ಭವಿಷ್ಯದಲ್ಲಿ ಸಮಾಜ ಎತ್ತ ಸಾಗಬಹುದು ಎಂಬ ದಿಗಿಲು ಕಾಡುತ್ತಿದೆ’ಎಂದು ಜೆಡಿಎಸ್ ವರಿಷ್ಠ ಹಾಗೂ ಶಾಸಕ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಪತ್ರಕರ್ತ ಆರ್.ಟಿ.ವಿಠ್ಠಲ ಮೂರ್ತಿ ಅವರ, ‘ಇದೊಂಥರಾ ಆತ್ಮಕಥೆ’ಪುಸ್ತಕ ಬಿಡುಗಡೆ ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಾಂವಿಧಾನಿಕ ಸಂಸ್ಥೆಗಳು ಹಂತಹಂತವಾಗಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಪತ್ರಕರ್ತರು, ಜಾತಿಯ ಅಥವಾ ಮತ್ಯಾವುದೇ ಹಂಗಿಗೆ ಒಳಗಾಗದಂತೆ ಕಾರ್ಯ ನಿರ್ವಹಿಸಬೇಕಿದೆ’ಎಂದರು.
ನಾವೆಲ್ಲಿಗೆ ಹೋಗಿ ತಲುಪಲಿದ್ದೇವೆ?:‘ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳೇಕೆ ಈ ರೀತಿ ವರ್ತಿಸುತ್ತಿವೆ’ಎಂದು ಪ್ರಶ್ನಿಸಿದ ಅವರು, ‘ಸಮಾಜದ ಕಾವಲುಗಾರ ಸ್ಥಾನದಲ್ಲಿರುವ ಮಾಧ್ಯಮಗಳು ನೀಡುತ್ತಿರುವ ನಕಾರಾತ್ಮಕ ಸುದ್ದಿಗಳಿಂದ ನಾವೆತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಜಿಡಿಪಿಯಿಂದ ದೇಶದ ಅಭಿವೃದ್ಧಿ ಅಳೆಯಲು ಸಾಧ್ಯವಿಲ್ಲ. ದೇಶದ ಬಡವರ ಬಗ್ಗೆ ಗಮನಹರಿಸಬೇಕು’ಎಂದರು.
ಸಮಾಜ ಏನಾದ್ರೂ ಪರವಾಗಿಲ್ಲ:
‘ಓದುವ ಪ್ರವೃತ್ತಿ ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ಟಿ.ವಿ ಚಾನೆಲ್ ಗಳು, ಸಮಾಜ ಏನಾದ್ರೂ ಆಗಲಿ, ನಾವು ಬದುಕಿದರೆ ಸಾಕು ಎಂಬಂತಹ ಸ್ಥಿತಿ ತಲುಪಿದ್ದು, ಜನರಿಗೆ ಬೇಡವಾದ ಕೆಟ್ಟ ಸುದ್ದಿಗಳನ್ನೇ ಬಿತ್ತರಿಸುತ್ತಾ ಸ್ವಾಸ್ಥ್ಯ ಹಾಳು ಮಾಡಿವೆ’ಎಂದು ಟೀಕಿಸಿದರು.
ಶಾಸಕ ಡಿ.ಕೆ.ಶಿವಕುಮಾರ್ ಅವರ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾರ್ವಜನಿಕ ಜೀವನದಲ್ಲಿ ಇರುವವರು ಇಂತಹ ಸಂಗತಿಗಳನ್ನು ಸಮಾನವಾಗಿ ಸ್ವೀಕರಿಸಬೇಕು’ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.