ADVERTISEMENT

ಬೆಂಗಳೂರು: ಸಲಾಂ ಹೇಳುವಂತೆ ಬೆದರಿಸಿದ್ದ ರೌಡಿಯ‌ನ್ನೇ ಕೊಂದ

​ಪ್ರಜಾವಾಣಿ ವಾರ್ತೆ
Published 16 ಮೇ 2020, 11:28 IST
Last Updated 16 ಮೇ 2020, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸಲಾಂ’ ಹೇಳುವಂತೆ ಬೆದರಿಸಿ ಕಪಾಳಕ್ಕೆ ಹೊಡೆದ ಎಂಬ ಕಾರಣಕ್ಕೆ ರೌಡಿ ಮುಜಾಹಿದ್ದೀನ್ ಅಲಿಯಾಸ್ ಮುಜಾ (43) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಜಾಫರ್ (26) ಎಂಬಾತನನ್ನು ಬಂಧಿಸಲಾಗಿದೆ.

‘ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿ ಶಂಪೂರ ಬಳಿಯ ಸಮೋಸಾ ಮಳಿಗೆ ಎದುರು ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಗಾರೆ ಕೆಲಸಗಾರನಾದ ಜಾಫರ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆ.ಜಿ.ಹಳ್ಳಿ ಠಾಣೆ ರೌಡಿಶೀಟರ್ ಆಗಿದ್ದ ಮುಜಾಹಿದ್ದೀನ್, ರೋಜಾ ಬಿಡುವ ವೇಳೆ ಸಮೋಸಾ ಖರೀದಿಸಲೆಂದು ಮಳಿಗೆಗೆ ಬಂದಿದ್ದ. ಅಲ್ಲಿಯೇ ಸಮೋಸಾ ಖರೀದಿಸುತ್ತಿದ್ದ ಜಾಫರ್ ತನ್ನ ಪಾಡಿಗೆ ತಾನು ನಿಂತಿದ್ದ. ಆತನನ್ನು ನೋಡಿದ್ದ ಮುಜಾಹಿದ್ದೀನ್, ‘ನಾನು ಯಾರು ಗೊತ್ತಾ. ಈ ಏರಿಯಾ ರೌಡಿ. ನನಗೆ ಸಲಾಂ ಹೇಳು’ ಎಂದು ಬೆದರಿಸಿದ್ದ.’

ADVERTISEMENT

‘ನೀನಗ್ಯಾಕೆ ಸಲಾಂ ಹೇಳಬೇಕು? ನಾನು ಹೇಳುವುದಿಲ್ಲ’ ಎಂದು ಜಾಫರ್ ವಾದಿಸಿದ್ದ. ಅವಾಗಲೇ ರೌಡಿ, ಆತನ ಕಪಾಳಕ್ಕೆ ಹೊಡೆದಿದ್ದ. ಅದರಿಂದ ಸಿಟ್ಟಾದ ಜಾಫರ್, ಮಳಿಗೆ ಸಮೀಪದಲ್ಲೇ ಪಪ್ಪಾಯಿ ಕತ್ತರಿಸಲು ತಳ್ಳುಗಾಡಿಯಲ್ಲಿ ಇಟ್ಟಿದ್ದ ಚಾಕು ತೆಗೆದುಕೊಂಡು ರೌಡಿ ಮೇಲೆ ದಾಳಿ ಮಾಡಿದ್ದ. ದೇಹದ ಹಲವೆಡೆ ಇರಿದಿದ್ದ’ ಎಂದು ಪೊಲೀಸರು ತಿಳಿಸಿದರು.

‘ತೀವ್ರ ರಕ್ತಸ್ರಾವದಿಂದ ಮುಜಾಹಿದ್ದೀನ್ ಸ್ಥಳದಲ್ಲೇ ಮೃತಪಟ್ಟ. ವಿಷಯ ತಿಳಿದು ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರಗೆ ರವಾನಿಸಲಾಗಿದೆ’ ಎಂದು ಹೇಳಿದರು.‘ಕೊಲೆ ಆರೋಪದಡಿ ಜಾಫರ್‌ನನ್ನು ಬಂಧಿಸಲಾಗಿದೆ. ತಾನೇ‌ ಕೊಲೆ ಮಾಡಿರುವಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ' ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.