ಕಲಬುರಗಿ: ‘ವರದಿ, ಲೇಖನಗಳ ಮೂಲಕ ಸಮಾಜ, ಸರ್ಕಾರವನ್ನು ಎಚ್ಚರದ ಸ್ಥಿತಿಯಲ್ಲಿಟ್ಟಿರುವ ಗ್ರಾಮೀಣ ಭಾಗದ ಪತ್ರಕರ್ತರಿಗೂ ಆರೋಗ್ಯ ಕಾರ್ಡ್ ಹಾಗೂ ಬಸ್ ಪಾಸ್ ವಿತರಿಸುವ ಚಿಂತನೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮಂಗಳವಾರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಲ್ಲಿ ಹಮ್ಮಿಕೊಂಡಿದ್ದ36ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ‘ಪತ್ರಕರ್ತರಿಗೆ ಹೆಚ್ಚಿನ ಸವಲತ್ತು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಯಾವ ಪತ್ರಿಕೆಯೂ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಮುದ್ರಣ ನಿಲ್ಲಿಸಬಾರದು ಎಂಬ ಕಾಳಜಿ ಸರ್ಕಾರಕ್ಕಿದೆ. ಆದ್ದರಿಂದ ನಿರಂತರವಾಗಿ ಜಾಹೀರಾತು ಬಿಡುಗಡೆ ಮಾಡುತ್ತಿದೆ’ ಎಂದರು.
‘ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಶ್ಲಾಘನೀಯ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೋವಿಡ್ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡುವ ಯೋಜನೆ ರೂಪಿಸಿದ್ದರು. ಅದನ್ನು ಮುಂದುವರಿಸಿದ್ದೇನೆ‘ ಎಂದು ತಿಳಿಸಿದರು.
ಕೆಕೆಆರ್ಡಿಬಿಗೆ ₹ 3 ಸಾವಿರ ಕೋಟಿ
‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹ 3 ಸಾವಿರ ಕೋಟಿ ಹಣ ಒದಗಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಮಾಸಾಂತ್ಯದಲ್ಲಿ ಈ ಭಾಗದ ಜನಪ್ರತಿನಿಧಿಗಳನ್ನು ಕರೆಸಿ ಚರ್ಚಿಸುತ್ತೇನೆ. ಒಂದು ವರ್ಷದಲ್ಲಿ ₹ 3 ಸಾವಿರ ಕೋಟಿ ಖರ್ಚು ಮಾಡಲು ಒತ್ತು ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.
‘ಹಿಂದೆ ಘೋಷಿಸಿದ್ದಂತೆ ಒಂದು ವಾರದಲ್ಲಿ 371 (ಜೆ) ಕೋಶವನ್ನು ಕಲಬುರಗಿಗೆ ಸ್ಥಳಾಂತರಿಸುತ್ತೇನೆ. ಶೀಘ್ರವೇ ಈ ಭಾಗದ 14 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.