ಬೆಂಗಳೂರು: ರಾಜ್ಯದಲ್ಲಿ ಎಚ್1ಎನ್1 ಬಗ್ಗೆ ಕಟ್ಟೆಚ್ಚರ ವಹಿಸುವುದರ ಜತೆಗೆ ಪ್ರತಿ ದಿನವೂ ತಮಗೆ ವರದಿ ನೀಡಬೇಕು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೋಗಿಗಳು ಯಾವುದೇ ಕ್ಷಣದಲ್ಲಿ ಆಸ್ಪತ್ರೆಗೆ ಬಂದರೂ ಚಿಕಿತ್ಸೆ ನಿರಾಕರಿಸಬಾರದು. ಹಳ್ಳಿ– ಹಳ್ಳಿಗಳಲ್ಲೂ ಎಚ್1ಎನ್1 ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಅವರುವಿಕಾಸಸೌಧದಲ್ಲಿ ಸೋಮವಾರ ನಡೆದ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಹೇಳಿದರು.
ಅಲ್ಲದೆ, ಜಿಲ್ಲಾ ಮಟ್ಟದಲ್ಲಿರುವ ‘ಡೆತ್ ಆಡಿಟ್’ ತಂಡಗಳನ್ನು ಬಲಪಡಿಸಬೇಕು. ಇದಕ್ಕೆ ರಾಜೀವ್ಗಾಂಧಿ ಎದೆ ರೋಗಗಳ ಆಸ್ಪತ್ರೆಯ ನೆರವೂ ಪಡೆಯಬಹುದು. ರೋಗಿಗಳು ಒಂದು ವೇಳೆ ಸಾವನ್ನಪ್ಪಿದರೆ, ಯಾವ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಪ್ರತಿ ದಿನವೂ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಒಂದೇ ದಿನ ಎಚ್1ಎನ್1ನಿಂದ 12 ರೋಗಿಗಳು ಸಾವನ್ನಪ್ಪಿದ ವಿಷಯವನ್ನು ಸಚಿವರು ಪ್ರಸ್ತಾಪಿಸಿದಾಗ, ಒಂದೇ ದಿನ ಅಷ್ಟು ಮಂದಿ ಸಾವನ್ನಪ್ಪಿಲ್ಲ. ಮಾಹಿತಿಯನ್ನು ಕ್ರೊಢೀಕರಿಸಿ ನೀಡುವಾಗ ಆದ ಲೋಪದಿಂದ ಮಾಧ್ಯಮಗಳಲ್ಲಿ ಆ ರೀತಿ ವರದಿ ಆಗಿದೆ ಎಂಬುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್’ ಮತ್ತು ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೊಳಿಸುವಾಗ ಬಡ ಜನರಿಗೆ ಹೆಚ್ಚಿನ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು. ಆರೋಗ್ಯ ಕರ್ನಾಟಕ ಜಾರಿಯ ಬಗ್ಗೆ ವಿವರ ಪಡೆದ ಸಚಿವರು,ಎಲ್ಲ ಜಿಲ್ಲಾ ಆಸ್ಪತ್ರೆಗಳು ಇನ್ನೂ ಪಡೆಯದೇ ಇರುವ ಪ್ರೋತ್ಸಾಹ ಧನವನ್ನು 15 ದಿನಗಳಲ್ಲಿ ಪಡೆದುಕೊಳ್ಳಬೇಕು ಎಂದರು.
24x4 ಪಿಎಚ್ಸಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಲ್ಲಿ, ಅಲ್ಲಿನ ಸಿಬ್ಬಂದಿಯನ್ನು ಬದಲಾಯಿಸಲೂ ಶಿವಾನಂದ ಪಾಟೀಲ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.