ಬೆಳಗಾವಿ: ‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನ ಇದ್ದುದ್ದರಿಂದಲೇ ನನಗೆ ಅನಾರೋಗ್ಯ ಕಾಡಿತು’ ಎಂದು ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಕಾಗವಾಡ ತಾಲ್ಲೂಕಿನ ಕೆಂಪವಾಡದಲ್ಲಿ ಬಹಳ ದಿನಗಳ ನಂತರ ಕಾಣಿಸಿಕೊಂಡ ಅವರು, ಮಂಗಳವಾರ ಬೆಂಬಲಿಗರ ಸಭೆಗೂ ಮುನ್ನ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಯಾವುದೇ ಕೆಲಸಗಳು ಆಗಲಿಲ್ಲ. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಸ್ಪಂದಿಸಲಿಲ್ಲ. ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವುದಕ್ಕೂ ಸಾಧ್ಯವಾಗಲಿಲ್ಲ. ನನ್ನ ಕಾಗವಾಡ ಕ್ಷೇತ್ರದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ಸರ್ಕಾರ ಕ್ರಮ ವಹಿಸಲಿಲ್ಲ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು. ಹೀಗಾಗಿ, ಬೇಸರದಿಂದ ಸರ್ಕಾರದ ವಿರುದ್ಧ ನಿರ್ಧಾರ ಮಾಡಬೇಕಾಯಿತು’ ಎಂದರು.
‘ನಾನು ಭತ್ಯೆಗಾಗಿ ಶಾಸಕನಾಗಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ, ಜನರಿಗೆ ಏನಾದರೂ ಅನುಕೂಲ ಮಾಡಿಕೊಡಬೇಕೆಂದು ಬಯಸಿದ್ದೆ. ಆದರೆ, ಸರ್ಕಾರದಿಂದ ಅನುದಾನ ನೀಡಲಿಲ್ಲ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.