ADVERTISEMENT

ರಾಜ್ಯದ ಹಲವೆಡೆ ಸುರಿದ ಮಳೆ: ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 1:06 IST
Last Updated 5 ಏಪ್ರಿಲ್ 2025, 1:06 IST
ಮಡಿಕೇರಿಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ಹರಿಯಿತು
ಮಡಿಕೇರಿಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ಹರಿಯಿತು   

ಮಡಿಕೇರಿ/ಹುಬ್ಬಳ್ಳಿ: ಮಡಿಕೇರಿಯಲ್ಲಿ ಶುಕ್ರವಾರ ಸಂಜೆ ಗುಡುಗು, ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದು ವರ್ಷದ ಮೊದಲ ಬಿರುಸಿನ ಮಳೆ. ತಾಲ್ಲೂಕಿನ ನಾಪೋಕ್ಲು ಹೋಬಳಿಯಲ್ಲಿ ಸಾಧಾರಣ ಮಳೆಯಾಯಿತು. ಮೈಸೂರಿನಲ್ಲಿ ರಾತ್ರಿ ಕೆಲಕಾಲ ಮಳೆ ಸುರಿಯಿತು.

ಬಳ್ಳಾರಿ ಜಿಲ್ಲೆಯಲ್ಲಿ ಎರಡನೇ ದಿನವೂ ಮಳೆ ಮುಂದುವರಿದಿದ್ದು, ವಿಜಯನಗರ ಹಾಗೂ ಹಾವೇರಿ ಜಿಲ್ಲೆಯಲ್ಲೂ ಶುಕ್ರವಾರ ಮಳೆಯಾಗಿದೆ.

ಬಳ್ಳಾರಿ ತಾಲ್ಲೂಕಿನಲ್ಲಿ 0.21 ಸೆಂ.ಮೀ, ಸಂಡೂರಿನಲ್ಲಿ 0.21, ಸಿರುಗುಪ್ಪ 0.73, ಕುರುಗೋಡು 0.75 ಮತ್ತು ಕಂಪ್ಲಿ 0.40 ಸೆಂ.ಮೀ ಮಳೆಯಾಗಿದೆ. 

ADVERTISEMENT

ವಿಜಯನಗರ ಜಿಲ್ಲೆಯಲ್ಲಿ ಒಂದು ದಿನದ ಅವಧಿಯಲ್ಲಿ 1.40 ಸೆ.ಮೀ ಮಳೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಗುರುವಾರ ತಡರಾತ್ರಿ ಸುರಿದ ಮಳೆಯಿಂದ ಮನೆ ಚಾವಣಿ ಕುಸಿದು, ಮಹಿಳೆಗೆ ಗಾಯವಾಗಿದೆ.

ಹಾವೇರಿ ಜಿಲ್ಲೆಯಾದ್ಯಂತ ಹಲವು ಕಡೆ ಶುಕ್ರವಾರವೂ ಮಳೆಯಾಗಿದೆ. ಜೋರು ಗಾಳಿ ಜೊತೆ ಗುಡುಗು–ಸಿಡಿಲು ಅಬ್ಬರವೂ ಇತ್ತು. ಹಾವೇರಿ, ಹಾನಗಲ್, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ ಮಳೆ ಸುರಿಯಿತು.

ಮಡಿಕೇರಿಯಲ್ಲಿ ಶುಕ್ರವಾರ ಮಳೆ ನಿಂತು ಹೋದ ಮೇಲೆಯೂ ದಟ್ಟ ಮೋಡಗಳು ಕವಿದಿದ್ದವು. ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.