ಬೆಂಗಳೂರು: ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಕಮಲಾಪುರ ಮತ್ತು ಅಫಜಲಪುರ ತಾಲ್ಲೂಕುಗಳಲ್ಲಿ ಒಳ್ಳೆಯ ಮಳೆಯಾಯಿತು.
ಕಾಳಗಿಯ ಸಂಜಯನಗರದಲ್ಲಿ ಸಿಡಿಲು ಬಡಿದು ಹಸು, ಹೋರಿ ಮತ್ತು ತೊಂಚಿ ಗ್ರಾಮದಲ್ಲಿ ಆಕಳು ಸಾವ
ನ್ನಪ್ಪಿದೆ.ಕಾಳಗಿ ಪಟ್ಟಣದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಗೋಟೂರ-ಕಾಳಗಿ ನಡುವಿನ ರಾಜ್ಯ ಹೆದ್ದಾರಿ ಬದಿಯ ಜಾಲಿ ಮರ ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಕಲ್ಮೂಡ ಗ್ರಾಮದ ಪಕ್ಕದ ಹಳ್ಳ ತುಂಬಿ ಸೇತುವೆ ಮೇಲೆ ಹರಿದು ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಭುಂಯಾರ ಕೆರೆಯೂ ತುಂಬಿ ನೀರು ಹೊರ ಹರಿಯಿತು. ದಿನಸಿ, ಭೀಮನಾಳ, ಲಿಂಬುನಾಯಕ ತಾಂಡಾಗಳ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ
ಗೊಂಡಿತು.ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಅಳವಂಡಿಯಲ್ಲಿ ಉತ್ತಮ ಮಳೆಯಾಯಿತು.
ಶಿವಮೊಗ್ಗ ನಗರ, ತೀರ್ಥಹಳ್ಳಿ, ಹೊಸನಗರ, ರಿಪ್ಪನ್ಪೇಟೆಯ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಶಿಕಾರಿಪುರ, ಸೊರಬದಲ್ಲಿ ಶನಿವಾರ ರಾತ್ರಿ ಜೋರು ಮಳೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯರಾತ್ರಿ 12ರ ನಂತರ ಆರಂಭವಾದ ಬಿರುಸಿನ ಮಳೆ ಭಾನುವಾರ ಮುಂಜಾನೆವರೆಗೂ ಮುಂದುವರಿದಿತ್ತು. ಇದರಿಂದಾಗಿ ಹಲವೆಡೆ ಹಳ್ಳ-ಕೊಳ್ಳಗಳು, ಹೊಂಡಗಳು ತುಂಬಿ ಹರಿಯುತ್ತಿವೆ.
ಚಿತ್ರದುರ್ಗ ನಗರ ಸೇರಿ ತಾಲ್ಲೂಕಿನ ಐನಹಳ್ಳಿ, ತುರುವನೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಸಮೀಪದ ಗುಂಡಿಹಳ್ಳವೂ ಧಾರಾಕಾರ ಮಳೆಗೆ ಮೈದುಂಬಿ ಹರಿಯುತ್ತಿದೆ. ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸುತ್ತಮುತ್ತ ಹದ ಮಳೆಯಾಗಿದೆ. ಚಳ್ಳಕೆರೆ ನಗರದ ಸಂತೆ ಮೈದಾನ ಜಲಾವೃತವಾಗಿದೆ.
ದಾವಣಗೆರೆಯಲ್ಲೂ ಶುಕ್ರವಾರ ರಾತ್ರಿಯಿಡಿ ಉತ್ತಮ ಮಳೆಯಾಗಿದೆ.
ಕೆಜಿಎಫ್ ನಗರದ ಊರಿಗಾಂ ಪೇಟೆ ಮತ್ತು ಹೆನ್ರೀಸ್ ಬಡಾವಣೆಗಳಲ್ಲಿ ಭಾನುವಾರ ಭಾರಿ ಮಳೆ ಸುರಿಯಿದೆ. ಊರಿಗಾಂಪೇಟೆಯಲ್ಲಿ ರಾಜಕಾಲುವೆ ತುಂಬಿ ನೀರು ರಸ್ತೆಗೆ ಹರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.