ADVERTISEMENT

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 0:18 IST
Last Updated 7 ಜನವರಿ 2024, 0:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ/ಮಡಿಕೇರಿ/ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕೊಡಗು, ದಕ್ಷಿಣ ಕನ್ನಡ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ವಿವಿಧೆಡೆ ಶನಿವಾರ ಮಳೆಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರವೂ ಸೇರಿದಂತೆ ಸುಳ್ಯ ಮತ್ತು ಕಡಬ ತಾಲ್ಲೂಕಿನಾದ್ಯಂತ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಸಂಜೆ ಭಾರಿ ಮಳೆ ಸುರಿಯಿತು. ಸುಳ್ಯ ತಾಲ್ಲೂಕಿನ ಗುತ್ತಿಗಾರು, ದೇವಚಳ್ಳ, ಎಲಿಮಲೆ, ಮರ್ಕಂಜ, ವಳಲಂಬೆ, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ಐವರ್ನಾಡು, ಕೊಲ್ಲಮೊಗ್ರು, ಅರಂತೋಡು ಮೊದಲಾದ ಕಡೆಗಳಲ್ಲಿ ಸರಾಸರಿ 7 ಸೆಂ.ಮೀ.ಯಷ್ಟು ಮಳೆಯಾಗಿದೆ. ಸುಳ್ಯ ಪಟ್ಟಣದಲ್ಲೂ ಎರಡು ತಾಸು ಧಾರಾಕಾರ ಮಳೆ ಸುರಿಯಿತು. 

ADVERTISEMENT

ಕೊಡಗು ಜಿಲ್ಲೆಯ ನಾಪೋಕ್ಲು ಭಾಗದಲ್ಲಿ ಶನಿವಾರ ಮಳೆಯಾಗಿದ್ದು, ಕಣದಲ್ಲಿ ಹರಡಿದ್ದ ಕಾಫಿಗೆ ಹಾನಿಯಾಗಿದೆ.

ಬೆಳಿಗ್ಗೆಯಿಂದ ತುಸು ಬಿಸಿಲು ಇದ್ದುದ್ದರಿಂದ ಹಲವೆಡೆ ಕಾಫಿಯನ್ನು ಒಣಗಲು ಹಾಕಲಾಗಿತ್ತು. ಮಧ್ಯಾಹ್ನದ ನಂತರ ಜೋರು ಮಳೆ ಬಿದ್ದಿತು. ಮಡಿಕೇರಿ ನಗರದಲ್ಲಿ ಸಂಜೆ ಜೋರು ಮಳೆಯಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕ, ಬೈಲಹೊಂಗಲ, ಘಟಪ್ರಭಾ, ಸಂಕೇಶ್ವರ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಜೆ ಅರ್ಧ ಗಂಟೆ ಉತ್ತಮ ಮಳೆ ಸುರಿಯಿತು.

ಗದಗ ಜಿಲ್ಲೆಯ ಡಂಬಳದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ನಸುಕಿನಲ್ಲಿ ಮಳೆಯಾಯಿತು. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.