ಬೆಂಗಳೂರು: ಕೊಲೆ ಆರೋಪಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ವಿಜಯಪುರ ಜಿಲ್ಲೆ ದೇವರ ಗೆಣ್ಣೂರು ಗ್ರಾಮದ ಅಶೋಕ್ ಎಂಬುವರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ಕಲಬುರ್ಗಿ ಪೀಠ ವಿಚಾರಣೆ ನಡೆಸಿತು.
2012ರ ಮೇ 18ರಂದು ರಾಚಪ್ಪ ಎಂಬವರ ಕೊಲೆ ನಡೆದಿತ್ತು. ಅಶೋಕ್ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ರಾಚಪ್ಪ ಅವರಿಂದ ₹50 ಸಾವಿರ ಸಾಲ ಪಡೆದಿದ್ದ ಅಶೋಕ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. 2014ರ ಜೂನ್ 16ರಂದು ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.
‘ರಾಚಪ್ಪ ಹತ್ಯೆಯಾಗಿದ್ದಾರೆ ಎಂಬುದನ್ನು ವೈದ್ಯಕೀಯ ದಾಖಲೆಗಳು ಹೇಳುತ್ತಿವೆ. ಆದರೆ, ಪ್ರತ್ಯಕ್ಷ ಸಾಕ್ಷ್ಯ ಇಲ್ಲ. ಇದ್ದ ಒಂದೇ ಒಂದು ಸಾಕ್ಷ್ಯ ಕೂಡ ಪ್ರತಿಕೂಲವಾಗಿದೆ’ ಎಂದು ಪೀಠ ಹೇಳಿತು.
‘ಮೃತಪಟ್ಟ ವ್ಯಕ್ತಿ ಮತ್ತು ಆರೋಪಿ ನಡುವೆ ಹಣಕಾಸಿನ ವಹಿವಾಟು ನಡೆದಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಇಲ್ಲ. ಹಣ ಕೊಟ್ಟಿರುವುದನ್ನು ರಾಚಪ್ಪ ಅವರ ಮಗ ನೋಡಿಲ್ಲ. ಸಣ್ಣ ಡೈರಿಯನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಅದನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಡೈರಿಯಲ್ಲಿ ಸಾಲದ ವಿವರಗಳನ್ನು ದಾಖಲು ಮಾಡುತ್ತಿದ್ದರು ಎನ್ನಲಾದ ರಾಚಪ್ಪ ಅವರ ಮಗಳನ್ನೂ ನ್ಯಾಯಾಲಯ ವಿಚಾರಣೆ ನಡೆಸಿಲ್ಲ. ಹೀಗಾಗಿ ಹಣಕಾಸಿನ ವ್ಯವಹಾರ ನಡೆದಿದೆ ಎಂಬುದೇ ರುಜುವಾತಾಗಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.