ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಬಳ್ಳಾರಿಯ ಗುಂಡುರಾವ್ ದೇಸಾಯಿ ಅವರಿಗೆ ಕೂಡಲೇ ಪಿಂಚಣಿ ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಹೋರಾಟದ ಸಂದರ್ಭದಲ್ಲಿ ಒಂದು ಬಾರಿ ಅವರು ಸಹಕೈದಿ ಆಗಿದ್ದರ ಬಗ್ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಎರಡು ಬಾರಿ ಸಹಕೈದಿ ಆಗಿದ್ದರ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಎಂದು ಪಟ್ಟು ಹಿಡಿಯಲಾಗಿದೆ. ಎರಡು ದಶಕಗಳಿಂದ ಪಿಂಚಣಿ ಮಂಜೂರು ಮಾಡಿಲ್ಲ’ ಎಂದು ಬಳ್ಳಾರಿ ಜಿಲ್ಲೆಯ ಕಮಲಾಪುರದ 94 ವರ್ಷ ವಯಸ್ಸಿನ ಗುಂಡುರಾವ್ ದೇಸಾಯಿ ಅವರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ‘ಎರಡು ಬಾರಿ ಸಹ ಕೈದಿಯಾಗಿದ್ದರ ಬಗ್ಗೆ ಪ್ರಮಾಣಪತ್ರವನ್ನು ಈಗ ಕೇಳಿದರೆ ಅವರು ಸಲ್ಲಿಸಲು ಸಾಧ್ಯವಿಲ್ಲದ ಮಾತು. ಪಿಂಚಣಿ ಮಂಜೂರು ಮಾಡಬೇಕು’ ಎಂದು ಸೂಚಿಸಿತು.
‘ಆರು ವಾರಗಳಲ್ಲಿ ಅವರಿಗೆ ಪಿಂಚಣಿ ಮಂಜೂರು ಮಾಡಬೇಕು. ತಡ ಮಾಡಿದರೆ ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಹೊಸಪೇಟೆ ಉಪವಿಭಾಗಾಧಿಕಾರಿ ದಿನಕ್ಕೆ ತಲಾ ₹1 ಸಾವಿರದಂತೆ ಪಾವತಿಸಬೇಕಾಗುತ್ತದೆ’ ಎಂದು ಪೀಠವು ಎಚ್ಚರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.