ಬೆಂಗಳೂರು:'ವ್ಯಕ್ತಿಯೊಬ್ಬರಿಗೆ ಕೊರೊನಾ ಪತ್ತೆಯಾದ ಕೂಡಲೇ ಅವರು ಸ್ವಯಂ ಪ್ರೇರಿತವಾಗಿ ಅಥವಾ ವೈದ್ಯರ ಸಲಹೆ ಮೇರೆಗೆ ಕೋವಿಡ್-19 ಟೆಸ್ಟ್ಗೆ ಒಳಗಾಗಬೇಕು ಎಂದರೆ ಇರುವ ವ್ಯವಸ್ಥೆಯ ಸಂಪೂರ್ಣ ವಿವರವನ್ನು ಮಂಗಳವಾರ (ಜು.14) ಮಧ್ಯಾಹ್ನ 2.30ಕ್ಕೆ ಒದಗಿಸಬೇಕು' ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
'ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ' ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಪೀಠ ಸರ್ಕಾರಿ ವಕೀಲರಿಗೆ ಪ್ರಶ್ನೆಗಳ ಸುರಿಮಳೆಗರೆದಿದೆ.
ಈ ಎಲ್ಲ ಪ್ರಶ್ನೆಗಳಿಗೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಪ್ರಶ್ನೆಗಳು
* ರೋಗ ಲಕ್ಷಣಕ್ಕೆ ಸಂಬಂಧಿಸಿದ ಪ್ರಯೋಗಾಲಯಕ್ಕೆ ಹೋಗುವುದು ಹೇಗೆ?
* ತಪಾಸಣೆ ನಡೆಸುವಾಗ ಯಾವ ಪ್ರಕರಣಕ್ಕೆ ಆದ್ಯತೆ ನೀಡಬೇಕು ಎಂಬ ಮಾರ್ಗಸೂಚಿ ಇದೆಯೇ?
* ಪರೀಕ್ಷಾ ವರದಿ ನೀಡಲು ಕಾಲಮಿತಿ ನಿಗದಿಯಾಗಿದೆಯೇ ?
* ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ತಕ್ಷಣವೇ ಯಾವೆಲ್ಲಾ ವೈದ್ಯಕೀಯ ಸೌಲಭ್ಯ ಪಡೆಯಬಹುದು?
* ಅವುಗಳನ್ನು ಪಡೆಯಲು ಯಾವ ವ್ಯವಸ್ಥೆ ಇದೆ?
* ಪಾಸಿಟಿವ್ ಬಂದಾಗ ಆಸ್ಪತ್ರೆಗೆ ಹೋಗುವ ಪ್ರಕ್ರಿಯೆ ಏನು?
* ಯಾರನ್ನು ಮೊದಲು ಸಂಪರ್ಕಿಸಬೇಕು ?
* ಒಂದೊಮ್ಮೆ ಯಾರಾದರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಬಂದರೆ ನೈಜ ಕಾಲ (ರಿಯಲ್ ಟೈಮ್) ಹಾಗೂ ಆನ್ ಲೈನ್ ಡೇಟಾ ತೆಗೆದುಕೊಳ್ಳಲು ಯಾವುದಾದರೂ ವ್ಯವಸ್ಥೆ ಇದೆಯೇ?
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪಾಸಿಟಿವ್ ಬಂದರೆ ಬಿಬಿಎಂಪಿಯ ಸಂಬಂಧಿಸಿದ ಅಧಿಕಾರಿಗೆ ವರದಿ ರವಾನೆಯಾಗುತ್ತದೆ. ಅವರು ಸೋಂಕಿತರನ್ನು ಸಂಪರ್ಕಿಸುತ್ತಾರೆ ಎಂದು ಸರ್ಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಹಾಗಾದರೆ, ವರದಿ ಬಿಬಿಎಂಪಿ ಅಧಿಕಾರಿಗೆ ತಲುಪಿ, ಅವರು ಸೋಂಕಿತರನ್ನು ಸಂಪರ್ಕಿಸಲು ಎಷ್ಟು ಸಮಯ ಹಿಡಿಯುತ್ತದೆ?
* ಆನ್ಲೈನ್ನಲ್ಲಿ ಖಾಲಿ ಹಾಸಿಗೆಗಳ ಮಾಹಿತಿ ಲಭ್ಯವಿದೆಯೇ?
* ಸೋಂಕಿತರು ಐಸಿಯುಗೆ ದಾಖಲಾಗಬೇಕೆಂದರೆ ಯಾವ ವ್ಯವಸ್ಥೆ ಇದೆ?
* ಹಾಸಿಗೆ ಹಾಗೂ ಐಸಿಯು ಸಿಗದಿದ್ದರೆ ದೂರು ನೀಡುವುದು ಹೇಗೆ?
* ಈ ದೂರಿಗೆ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿದೆಯೇ?
* ತುರ್ತು ಆಂಬುಲೆನ್ಸ್ ಸೇವೆಗೆ ಕೈಗೊಳ್ಳುವ ಕ್ರಮವೇನು?
* ದೂರು-ಮಾಹಿತಿಗೆ ಒಂದೇ ಕೇಂದ್ರೀಕೃತ ಫೋನ್ ನಂಬರ್ ಇರಬೇಕು. ಅಂತಹ ವ್ಯವಸ್ಥೆ ಸಾಧ್ಯವೇ?
* ದೂರು ಬಂದ ಕೂಡಲೇ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ?
* ಅಂತಿಮವಾಗಿ ಸೋಂಕಿತ ವ್ಯಕ್ತಿ ಏನೆಲ್ಲಾ ಹಂತಗಳನ್ನು ದಾಟಿಕೊಂಡು ಆಸ್ಪತ್ರೆಗೆ ದಾಖಲಾಗಬೇಕು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.