ಬೆಂಗಳೂರು: ‘ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ (ಬ್ರಿಜೇಶ್ ಕುಮಾರ್ ಆಯೋಗ) ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿರುವ ಕೇಂದ್ರ ಸರ್ಕಾರದ ಕ್ರಮ ಕರ್ನಾಟಕಕ್ಕೆ ಆಘಾತ ತಂದಿದೆ’ ಎಂದು ಕಾನೂನು, ಗಡಿ ಮತ್ತು ಜಲ ವಿವಾದ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.
‘ನ್ಯಾಯಮಂಡಳಿ–2ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ನಲ್ಲಿ ಪ್ರಕಟಿಸಬೇಕೆಂದು ಕರ್ನಾಟಕ ಹತ್ತು ವರ್ಷಗಳಿಂದ ಒತ್ತಾಯ ಮಾಡುತ್ತಿದೆ. ಇತ್ಯರ್ಥವಾಗಿರುವ ಜಲ ವಿವಾದದಲ್ಲಿ ನ್ಯಾಯ ಅಪೇಕ್ಷಿಸುತ್ತಿದ್ದ ಕರ್ನಾಟಕಕ್ಕೆ ಕೇಂದ್ರದ ತೀರ್ಮಾನದಿಂದ ಅನ್ಯಾಯವಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಕೇಂದ್ರ ಸರ್ಕಾರ ಗೆಜೆಟ್ನಲ್ಲಿ ಪ್ರಕಟಣೆ ಮಾಡದೇ ಇರುವುದರಿಂದ ಕರ್ನಾಟಕದ ಪಾಲಿನ 200 ಟಿಎಂಸಿ ಅಡಿ ನೀರು ರಾಜ್ಯಕ್ಕೆ ದಕ್ಕದೇ ಬಹುದೊಡ್ಡ ಅನ್ಯಾಯಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಈ ಅವಧಿ ವಿಸ್ತರಣೆಯನ್ನು ಮರಳಿ ಪಡೆಯಬೇಕು. ಇಲ್ಲವೇ, ಗೆಜೆಟ್ನಲ್ಲಿ ಪ್ರಕಟಿಸಲು ನ್ಯಾಯಯುತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.