ADVERTISEMENT

ಆಸ್ತಿ ತೆರಿಗೆ ಹೆಚ್ಚಳ ಕೈಬಿಡಲು ಮುಖ್ಯಮಂತ್ರಿಗೆ ಮನವಿ

ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಎಚ್‌ಕೆಸಿಸಿಐ ನಿಯೋಗ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 16:05 IST
Last Updated 8 ಜುಲೈ 2021, 16:05 IST
ಆಸ್ತಿ ತೆರಿಗೆ ಹೆಚ್ಚಳನ್ನು ರದ್ದುಪಡಿಸಲು ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ, ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು
ಆಸ್ತಿ ತೆರಿಗೆ ಹೆಚ್ಚಳನ್ನು ರದ್ದುಪಡಿಸಲು ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ, ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು   

ಕಲಬುರ್ಗಿ: ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಹೆಚ್ಚಿಸಿರುವ ಆಸ್ತಿ ತೆರಿಗೆಯನ್ನು ಹಿಂದಕ್ಕೆ ಪಡೆಯಲು ಆದೇಶಿಸಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.

ಬೆಂಗಳೂರಿನ ಮುಖ್ಯಮಂತ್ರಿ ಅವರ ಗೃಹಕಚೇರಿ ಕೃಷ್ಣಾದಲ್ಲಿ ಅವರನ್ನು ಭೇಟಿ ಮಾಡಿದಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ, ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರಿದ್ದ ನಿಯೋಗ, ‘2020ರಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಮಹಾನಗರ ಪಾಲಿಕೆ ಮತ್ತೆ ಶೇ 15ರಷ್ಟು ಪ್ರಸಕ್ತ ವರ್ಷ ಹೆಚ್ಚಳ ಮಾಡಿದೆ. ಇದರಿಂದಾಗಿ ಮೊದಲೇ ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿರುವ ವ್ಯಾಪಾರಸ್ಥರು ಹಾಗೂ ಆಸ್ತಿಗಳ ಮಾಲೀಕರಿಗೆ ತೊಂದರೆಯಾಗಲಿದೆ. ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಇಲ್ಲದಿದ್ದ ಸಂದರ್ಭದಲ್ಲಿ ಆಯುಕ್ತರು ಏಕಾಏಕಿ ತೆರಿಗೆ ಹೆಚ್ಚಳದ ನಿರ್ಣಯ ಕೈಗೊಂಡಿದ್ದು ಸರಿಯಲ್ಲ. ಶೇ 15ರಷ್ಟು ಹೆಚ್ಚಳ ಎಂದಿದ್ದರೂ ವಾಸ್ತವವಾಗಿ ಅದಕ್ಕಿಂತಲೂ ಹೆಚ್ಚಿನ ತೆರಿಗೆ ಆಕರಣೆ ಮಾಡಲಾಗುತ್ತಿದೆ’ ಎಂದು ದೂರಿದರು.

ಈ ಹೆಚ್ಚಳವು 2018–19ನೇ ಸಾಲಿಗೆ ನಿಗದಿಪಡಿಸಲಾದ ಮಾರ್ಗದರ್ಶಿ ಆಸ್ತಿ ಮೌಲ್ಯವನ್ನು ಆಧರಿಸಿದೆ. ಇದರಿಂದಾಗಿ ತೆರಿಗೆ ಪ್ರಮಾಣವೂ ಹೆಚ್ಚಾಗುತ್ತದೆ. ಆಸ್ತಿ ತೆರಿಗೆಯನ್ನು ನಿಗದಿಪಡಿಸುವಾಗ, ಹೆಚ್ಚಿಸುವಾಗ 15 ವರ್ಷಗಳ ಪೂರ್ವದ ಮಾರ್ಗದರ್ಶಿ ದರವನ್ನು ಪರಿಗಣಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

2021–22ರ ಸಾಲಿಗಾಗಿ ಹೆಚ್ಚಿಸಿರುವ ಅಸ್ತಿ ತೆರಿಗೆಯನ್ನು ಕೈಬಿಟ್ಟು 2004–05ರ ವರ್ಷದ ಮಾರ್ಗದರ್ಶಿ ದರವನ್ನು ಆಧರಿಸಿ ನಿಗದಿಪಡಿಸಲು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದರು.

ಇದಕ್ಕೂ ಮುನ್ನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರನ್ನು ಭೇಟಿ ಮಾಡಿ ಅವರಿಗೂ ಮನವಿ ಸಲ್ಲಿಸಿದರು.

ಪ್ರಕರಣ ಕೈಬಿಡಲು ಆಗ್ರಹ: ಲಾಕ್‌ಡೌನ್‌ ವಿಧಿಸುವುದಕ್ಕೂ ಮುನ್ನ ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ನ 250ಕ್ಕೂ ಅಧಿಕ ಅಂಗಡಿಗಳ ಮಾಲೀಕರ ಮೇಲೆ ಕೊರೊನಾ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಎಚ್‌ಕೆಸಿಸಿಐ ನಿಯೋಗವು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.