ಶಿವಮೊಗ್ಗ: ‘ವೀರಸಾವರ್ಕರ್ ಬ್ರಿಟಿಷರ ಬೂಟು ನೆಕ್ಕುವ ಕೆಲಸ ಮಾಡಿದ್ದರು ಎಂದು ಪದೇ ಪದೇ ಹೇಳಿಕೆ ನೀಡಿ ಒಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಬಿಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.
ಸಿದ್ದರಾಮಯ್ಯ ಅವರ ಪ್ರಚೋದನಕಾರಿ ಹೇಳಿಕೆಯಿಂದ ಪ್ರಭಾವಿತರಾಗಿ ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆಗೆಸಿರುವಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ವೊಬ್ಬರ ಪತಿ, ಈ ಎಲ್ಲ ಅಹಿತಕರ ಘಟನೆಗೆ ಕಾರಣನಾಗಿದ್ದಾನೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶವನ್ನು ಪ್ರೀತಿಸುವ ಎಲ್ಲರೂ ಸಾವರ್ಕರ್ ಅವರನ್ನು ಪ್ರೀತಿಸುತ್ತಾರೆ. ನಮಗೆ ಸಾವರ್ಕರ್ ರೋಲ್ಮಾಡೆಲ್. ಒಂದು ನಿರ್ದಿಷ್ಟ ಸಮುದಾಯದ ಓಟಿಗಾಗಿ ಸಿದ್ದರಾಮಯ್ಯ ಹೀಗೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಸಾವರ್ಕರ್ ಬಗ್ಗೆ ಅಭಿಮಾನ ಹೊಂದಿರುವ ಎಲ್ಲರ ಮನಸ್ಸಿಗೆ ನೋವಾಗಿದೆ ಎಂದರು.
ಮುಸ್ಲಿಮರು ಇರುವ ಪ್ರದೇಶದಲ್ಲಿ ಸಾವರ್ಕರ್ ಫೋಟೊ ಏಕೆ ಹಾಕಬೇಕು ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಸಾವರ್ಕರ್ ಫೋಟೊ ನಿಷೇಧಗೊಂಡಿದೆಯೇ? ಈ ದೇಶದಲ್ಲಿ ಯಾವ ಸ್ಥಳದಲ್ಲಿ ಫೋಟೊ ಹಾಕಬಾರದು ಎಂದು ಹೇಳಲು ಇದೇನು ವಿದೇಶವಾ? ಈ ರೀತಿಯ ಹೇಳಿಕೆಗಳು ಸಿದ್ದರಾಮಯ್ಯ ಅವರ ಬಾಯಲ್ಲಿ ಬರುತ್ತಿವೆ ಎಂದರೆ ಅದನ್ನು ನಿಲ್ಲಿಸುವುದು ಹೇಗೆ ಎಂದು ಪ್ರಶ್ನಿಸಿದರು.
‘ಇಲ್ಲಿ ಅನ್ನ ತಿಂದು, ಜೀವನ ಮಾಡಿ ಪಾಕಿಸ್ತಾನ ಜಿಂದಾಬಾದ್, ಪಾಕಿಸ್ತಾನ ನಮ್ಮ ರಾಷ್ಟ್ರ ಅನ್ನುತ್ತಾರೆ. ಇದು ಏನು ಅರ್ಥ ಅಂತಾ ನನಗೂ ಗೊತ್ತಿಲ್ಲ. ಯಾರು ಇದನ್ನು ಸೃಷ್ಟಿ ಮಾಡುತ್ತಾರೆ. ಪಾಕಿಸ್ತಾನದ ಬಾವುಟ ಹಾಕಿಕೊಳ್ಳುತ್ತಾರೆ. ಏನು ಮಾಡುತ್ತಿದ್ದಾರೆ. ಇದು ಎಲ್ಲಿಂದ ಬಂದಿದೆ ಎಂಬುದು ಗೊತ್ತಾಗುತ್ತಿಲ್ಲ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.