ಬೆಂಗಳೂರು: ‘ಅಯೋಧ್ಯೆಯಿಂದ ಮರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಪ್ರಕರಣವನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಕೆಣಕಿ ವ್ಯವಸ್ಥೆ ಹಾಳು ಮಾಡುವುದರಿಂದ ದೇಶಕ್ಕೆ ಉಳಿಗಾಲ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಿಜೆಪಿಯವರು ಈವರೆಗೂ ಅಭಿವೃದ್ಧಿ ವಿಚಾರವನ್ನು ಚರ್ಚೆ ಮಾಡುತ್ತಿಲ್ಲ. ಬೇರೆ ಧರ್ಮದವರನ್ನು ದ್ವೇಷಿಸುವುದು, ಅದಕ್ಕಾಗಿ ಪ್ರಚೋದಿಸುವಂಥ ಭಾವನಾತ್ಮಕ ವಿಚಾರಗಳನ್ನೇ ಪ್ರಸ್ತಾಪಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ. ದ್ವೇಷ ಭಾವನೆಯನ್ನು ವ್ಯಾಪಕವಾಗಿ ಬಿತ್ತಲಾಗುತ್ತಿದೆ. 75 ವರ್ಷಗಳಿಂದಲೂ ಇಲ್ಲದೇ ಇರುವಂತಹ ಅಸಹನೀಯ ವಾತಾವರಣ ಸೃಷ್ಟಿಸಲು ಯತ್ನಿಸಲಾಗುತ್ತಿದೆ.ಬೇರೆ ಸಮುದಾಯದವರ ಮೇಲೆ ದ್ವೇಷ ಸೃಷ್ಟಿಸಿ ಅಶಾಂತಿ ನಿರ್ಮಿಸುವುದೇ ಬಿಜೆಪಿಯವರ ಉದ್ದೇಶ’ ಎಂದು ದೂರಿದರು.
‘ಅಯೋಧ್ಯೆಯಿಂದ ಮೈಸೂರಿಗೆ ಬರುತ್ತಿದ್ದ ರೈಲನ್ನು ಹೊಸಪೇಟೆಯಲ್ಲಿ ನೀರು ತುಂಬಿಸಿಕೊಳ್ಳಲು ನಿಲ್ಲಿಸಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೊಂದು ಫ್ಲಾಟ್ಫಾರಂನಲ್ಲಿ ಬೇರೊಂದು ರೈಲು ನಿಂತಿದೆ. ಅದರಲ್ಲಿದ್ದ ಅನ್ಯ ಕೋಮಿನ ವ್ಯಕ್ತಿಯೊಬ್ಬ ನಿಂತಿದ್ದ ರೈಲುಗಳ ನಡುವೆ ಹಾದು ಹೋಗಿದ್ದಾನೆ. ಆತ ಗಡ್ಡ ಬಿಟ್ಟಿದ್ದ. ಕೆಲವರು ಆತನನ್ನು ಛೇಡಿಸಿ, ಗಲಾಟೆ ಮಾಡಿದ್ದಾರೆ. ಆತ ರೈಲನ್ನು ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದೆ. ರೈಲಿನಲ್ಲಿ ಅಷ್ಟೊಂದು ಜನ ಇದ್ದಾಗ ಒಬ್ಬ ವ್ಯಕ್ತಿ ಸುಟ್ಟು ಹಾಕುತ್ತೇನೆ ಎಂದು ಹೇಳಿಕೆ ನೀಡಿದ್ದಾನೆಯೊ, ಇಲ್ಲವೋ ಗೊತ್ತಿಲ್ಲ. ಪರಿಶೀಲನೆ ನಡೆಯುತ್ತಿದೆ. ಆತ ಪಾಕಿಸ್ತಾನದ ಪರವಾಗಿ ಮಾತನಾಡಿದ್ದ ಎಂದೆಲ್ಲಾ ವೈಭವೀಕರಿಸಲಾಗಿದೆ’ ಎಂದು ದೂರಿದರು.
‘ಆತನನ್ನು ಬಂಧಿಸಿ, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆ ನಂತರವೂ ಆತ ಎಲ್ಲಿ ಹೋಗುತ್ತಾನೆ. ಚಲನವಲನಗಳೇನು ಎಂಬ ಬಗ್ಗೆ ನಿಗಾ ವಹಿಸಲಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.