ADVERTISEMENT

ದಲಿತನೆಂಬ ಕಾರಣಕ್ಕೆ ಗೃಹ ಸಚಿವರಿಂದ ನಿರ್ಲಕ್ಷ್ಯ: ಶಾಸಕ ಎಂ.ಪಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 16:03 IST
Last Updated 23 ನವೆಂಬರ್ 2022, 16:03 IST
ಎಂ.ಪಿ.ಕುಮಾರಸ್ವಾಮಿ
ಎಂ.ಪಿ.ಕುಮಾರಸ್ವಾಮಿ   

ಬೆಂಗಳೂರು: ‘ನಾನೊಬ್ಬ ದಲಿತ ಶಾಸಕ ಎಂಬ ಕಾರಣಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆಯಾದರೂ ಸೌಜನ್ಯಕ್ಕೂ ಸಂಪರ್ಕಿಸಿ ಸಮಾಧಾನ ಹೇಳಿಲ್ಲ’ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದೆ. ನನ್ನ ಮೇಲೆ ಕಲ್ಲು, ದೊಣ್ಣೆಗಳಿಂದ ಹೊಡೆಯಲು ಬಂದಿದ್ದರು. ಇದೇನು ಸಣ್ಣ ಘಟನೆಯಲ್ಲ. ನಾನು ಬಿಜೆಪಿ ಶಾಸಕನೇ ಆಗಿದ್ದರೂ ಗೃಹ ಸಚಿವರು ಈವರೆಗೆ ದೂರವಾಣಿ ಕರೆ ಮಾಡಿಯೂ ವಿಚಾರಿಸಿಲ್ಲ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕರೆಮಾಡಿ ವಿಚಾರಿಸಿದರು. ಆದರೆ, ಗೃಹ ಸಚಿವರು ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಶಾಸಕ ಎಂಬ ಕಾರಣಕ್ಕಲ್ಲ ಸಹೋದ್ಯೋಗಿ ಎಂಬ ಕಾರಣಕ್ಕೂ ನನ್ನನ್ನು ಮಾತನಾಡಿಸದೇ ಇರುವುದು ನೋವು ತಂದಿದೆ. ನಾವು ಹೊಡೆಸಿಕೊಳ್ಳುವುದಕ್ಕಾಗಿಯೇ ಇರುವವರು ಎಂಬ ಭಾವನೆ ಅವರಲ್ಲಿ ಇರಬಹುದು’ ಎಂದು ಹೇಳಿದರು.

ADVERTISEMENT

‘ಸಮಾಧಾನದಿಂದ ಇರುವಂತೆ ಯಡಿಯೂರಪ್ಪ ಮತ್ತು ಸಿ.ಟಿ. ರವಿ ಹೇಳಿದ್ದಾರೆ. ಕ್ಷೇತ್ರದಲ್ಲಿ ಆನೆ ದಾಳಿ ನಡೆಯುತ್ತಲೇ ಇರುತ್ತದೆ. ಜನರಿಗೆ ಸಮಾಧಾನ ಹೇಳಲು ಹೋಗದೆ ಇರಲು ಆಗುತ್ತಾ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.