ADVERTISEMENT

ಹೊನ್ನಾವರ ಪ್ರಕರಣ: ರಾಮಕಥಾ ಗಾಯಕಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 19:34 IST
Last Updated 1 ಫೆಬ್ರುವರಿ 2019, 19:34 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೊನ್ನಾವರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿನ ನಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ ಮತ್ತು ಅವರ ಪತಿ ದಿವಾಕರ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶುಕ್ರವಾರ ಬೆಂಗಳೂರು ಪೀಠದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆದೇಶ ಪ್ರಕಟಿಸಿದೆ.

ಪ್ರಕರಣದ ಇತರ ಆರೋಪಿಗಳಾದ ಮತ್ತು ವಕೀಲರೂ ಆದ ಬಿ‌.ಟಿ.ವೆಂಕಟೇಶ್ ಮತ್ತು ಗಂಗಾಧರ ಶಾಸ್ತ್ರಿ, ಜ್ಯೋತಿಷಿ ಪದ್ಮನಾಭ ಶರ್ಮ, ಪದ್ಮಶ್ರೀ ಪುರಸ್ಕೃತ ಚ.ಮೂ.ಕೃಷ್ಣಶಾಸ್ತ್ರಿ ವಿರುದ್ಧದ ವಿಚಾರಣೆಯನ್ನು ಕೈಬಿಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ADVERTISEMENT

ಪ್ರಮುಖ ಆರೋಪಿಗಳಾದ ಪ್ರೇಮಲತಾ ಶಾಸ್ತ್ರಿ, ದಿವಾಕರ ಶಾಸ್ರ್ತಿ ಮತ್ತು ನಾರಾಯಣ ಶಾಸ್ತ್ರಿ ವಿರುದ್ಧದ ವಿಚಾರಣೆ ಮುಂದುವರಿಯಲಿದೆ‌.

‘ಈ ಮೂವರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದ್ದರಿಂದ ವಿಚಾರಣೆ ನಡೆಯಲಿ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಸ್ವಾಮೀಜಿ ಪರ ಕೆ.ಶಂಭು ಶರ್ಮ, ಪ್ರಶಾಂತ ಗೌಡರ ವಕಾಲತ್ತು ವಹಿಸಿದ್ದರು. ಹಿರಿಯ ವಕೀಲ ಎಸ್.ಎಂ.ಚಂದ್ರಶೇಖರ ವಾದ ಮಂಡಿಸಿದರು.

ಏನಿದು ಪ್ರಕರಣ?: ‘2014ರಲ್ಲಿ ಕೆಕ್ಕಾರು ಶಾಖಾಮಠದಲ್ಲಿ ನಡೆದ ಚಾತುರ್ಮಾಸ್ಯದ ವೇಳೆ ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ಶಾಸ್ತ್ರಿ ಅವರು ಬೆಂಗಳೂರಿನ ಬನಶಂಕರಿ ಪ್ರದೇಶದಿಂದ ಮಠದ ಭದ್ರತಾ ವಿಭಾಗದ ಕಾರ್ಯದರ್ಶಿ ಬಿ.ಆರ್.ಚಂದ್ರಶೇಖರ್‌ ಅವರಿಗೆ ಕಾಯಿನ್‌ ಬೂತ್‌ನಿಂದ ಫೋನ್‌ ಮಾಡಿದ್ದರು. ಸ್ವಾಮೀಜಿ ನಮಗೆ ₹ 3 ಕೋಟಿ ಕೊಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಅತ್ಯಾಚಾರದ ಕೇಸು ದಾಖಲಿಸುತ್ತೇವೆ ಎಂದು ಹೇಳಿದ್ದರು’ ಎಂಬುದಾಗಿ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಚಂದ್ರಶೇಖರ್‌ ದೂರು ದಾಖಲಿಸಿದ್ದರು.

ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಪ್ರೇಮಲತಾ ಶಾಸ್ತ್ರಿ ಮತ್ತು ದಿವಾಕರ ಶಾಸ್ತ್ರಿ ಅವರನ್ನು ಬಂಧಿಸಿ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಇವರು ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ನಂತರ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸಿದ ಸಿಐಡಿ ಬಿ.ರಿಪೋರ್ಟ್‌ ಸಲ್ಲಿಸಿತ್ತು. ಇದನ್ನು ಬಿ.ಆರ್.ಚಂದ್ರಶೇಖರ್ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ಅನುಸಾರ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.