ಬೆಂಗಳೂರು: ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಜತೆ ಬರುವವರಿಗೆ ವಸತಿ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಗುರುವಾರ ತಿಳಿಸಿದರು.
ಯಾವ ಆಸ್ಪತ್ರೆಯಲ್ಲೂ ರೋಗಿಗಳ ಜತೆಗೆ ಬಂದವರು ತಂಗಲು ವಸತಿ ಸೌಕರ್ಯ ಇಲ್ಲವಾಗಿದ್ದು, ರಾತ್ರಿ ವೇಳೆ ಪರದಾಡುತ್ತಾರೆ. ಅಂತಹವರಿಗೆ ವ್ಯವಸ್ಥೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಸುದ್ದಿಗಾರರಿಗೆ ಗುರುವಾರ ಹೇಳಿದರು.
ರಾತ್ರಿ 9 ಗಂಟೆ ನಂತರ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಬರುವವರಿಗೆ ಊಟ ಸಿಗುವುದಿಲ್ಲ. ಅಂತಹವರಿಗೆ ಆಸ್ಪತ್ರೆ ಬಳಿ ಊಟ ಸಿಗುವಂತೆ ಮಾಡುವುದು, ಜನೌಷಧಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಡೆಂಗಿ, ಚಿಕೂನ್ ಗುನ್ಯಾ ರೋಗ ಹೆಚ್ಚುತ್ತಿದ್ದು, ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆಯಲ್ಲಿ ಕೆಲವು ಲೋಪಗಳಿದ್ದು, ಸರಿಪಡಿಸಿದ ನಂತರ ಜಾರಿ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.